ಹೈಲೈಟ್ಸ್: ಬೆಂಗಳೂರು ನಗರ ಜಿಲ್ಲೆಯ ವಲಯ – 4ರಲ್ಲಿವೆ 2,208 ಸರಕಾರಿ ಶಾಲೆಗಳು ಮತ್ತು 208 ಅನುದಾನಿತ ಶಾಲೆಗಳು ಈ ಶಾಲೆಗಳಿಗೆ ಈವರೆಗೆ ಶೂ ಮತ್ತು ಸಾಕ್ಸ್ ಖರೀದಿಗೆ ಬಿಡುಗಡೆಯಾಗಿಲ್ಲ ಅಗತ್ಯವಿರುವ ಪೂರ್ಣ ಪ್ರಮಾಣದ ಅನುದಾನ 1-5ನೇ ತರಗತಿಯ ವಿದ್ಯಾರ್ಥಿಗಳಿಗೆ 265 ರೂ., 6-8ನೇ ತರಗತಿಗೆ 295 ರೂ. ಮತ್ತು 9-10ನೇ ತರಗತಿಗೆ 325 ರೂ. ಹಣ ನಿಗದಿ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಸರಕಾರಿ, ಅನುದಾನಿತ ಶಾಲೆಗಳ ಮಕ್ಕಳಿಗೆ ಶೂ, ಸಾಕ್ಸ್ ಸಿಕ್ಕಿಲ್ಲ.
ಶಾಲೆ ಆರಂಭವಾಗಿ ಅರ್ಧ ವರ್ಷ ಕಳೆದರೂ ಇನ್ನೂ ಸರಕಾರಿ, ಅನುದಾನಿತ ಶಾಲೆಗಳ ಮಕ್ಕಳಿಗೆ ಶೂ, ಸಾಕ್ಸ್ ಸಿಕ್ಕಿಲ್ಲ. ಪೂರ್ಣ ಪ್ರಮಾಣದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ. ಬೆಂಗಳೂರು ನಗರ ಜಿಲ್ಲೆಯ ವಲಯ – 4ರಲ್ಲಿ 2,208 ಸರಕಾರಿ ಶಾಲೆಗಳು, 208 ಅನುದಾನಿತ ಶಾಲೆಗಳಿವೆ. ಇವುಗಳಲ್ಲಿ 7,24,862 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬಡ, ಮಧ್ಯಮವರ್ಗದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶಾಲೆಯಲ್ಲಿ ಶೂ, ಸಾಕ್ಸ್ ಕೊಡದಿರುವ ಕಾರಣ, ಹಲವು ಮಕ್ಕಳು ಹಳೆ ಚಪ್ಪಲಿಯಲ್ಲಿ ಇಲ್ಲವೇ ಬರಿಗಾಲಿನಲ್ಲೇ ಶಾಲೆಗೆ ಬರುತ್ತಿದ್ದಾರೆ.

ಶೂ, ಸಾಕ್ಸ್ ಖರೀದಿಗೆಂದು ಶಿಕ್ಷಣ ಇಲಾಖೆ ಕೆಲ ಶಾಲೆಗಳಿಗೆ ಶೇ. 40ರಷ್ಟು, ಕೆಲ ಶಾಲೆಗಳಿಗೆ ಶೇ. 20ರಷ್ಟು ಹಣವನ್ನು ಆನ್ಲೈನ್ ಮೂಲಕ ಎಸ್ಡಿಎಮ್ಸಿ ಖಾತೆಗೆ ಜಮಾ ಮಾಡಿದೆ. ಬಂದ ಹಣದಲ್ಲಿ ಕೆಲವರಿಗಷ್ಟೇ ಶೂ, ಸಾಕ್ಸ್ ಕೊಡಿಸಿದರೆ ತಾರತಮ್ಯ ಮಾಡಿದಂತಾಗುತ್ತದೆ. ಪೂರ್ಣ ಪ್ರಮಾಣ ಅನುದಾನ ಸಿಕ್ಕರೆ ಮಾತ್ರ ಶೂ, ಸಾಕ್ಸ್ ಖರೀದಿಸಲು ಸಾಧ್ಯವಿದೆ. ಹೀಗಾಗಿ ಸರಕಾರ ಮಂಜೂರು ಮಾಡಿದ ಅನುದಾನ ಬ್ಯಾಂಕ್ನಲ್ಲೇ ಇರುವಂತಾಗಿದೆ. ”ನಮ್ಮ ಶಾಲೆಯಲ್ಲಿ 67 ವಿದ್ಯಾರ್ಥಿಗಳಿದ್ದಾರೆ. 26 ಸಾವಿರ ರೂ. ಮಾತ್ರ ಬಂದಿದೆ.
ಪ್ರತಿದಿನ ಬ್ಯಾಂಕಿಗೆ ಹೋಗಿ ಹಣ ಬಂದಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಬಂದಿರುವ ಹಣಕ್ಕೆ ಯಾವ ವರ್ಗದ ಮಕ್ಕಳಿಗೆ ನೀಡಬೇಕು ಎಂಬ ಮಾರ್ಗದರ್ಶನವಿಲ್ಲದೆ ಶಿಕ್ಷಕರು ಮತ್ತು ಎಸ್ಡಿಎಮ್ಸಿ ಸದಸ್ಯರು ಗೊಂದಲದಲ್ಲಿದ್ದಾರೆ. ಆದ್ದರಿಂದ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಟ್ಟುಕೊಂಡಿದ್ದೇವೆ. ಪೂರ್ತಿ ಮೊತ್ತ ಬಂದ ಮೇಲೆ ಖರೀದಿ ನಿರ್ಧಾರ ತೆಗೆದುಕೊಳ್ಳುತ್ತೇವೆ,” ಎಂದು ಹೆಸರು ಹೇಳಲು ಇಚ್ಛಿಸದ ಮುಖ್ಯಶಿಕ್ಷಕರೊಬ್ಬರು ಹೇಳಿದ್ದಾರೆ.

ಯಾವ ಮಕ್ಕಳಿಗೆ ಎಷ್ಟು ಮೊತ್ತ ನಿಗದಿ ? ಶೂ, ಸಾಕ್ಸ್ ಖರೀದಿ ನಿಟ್ಟಿನಲ್ಲಿ ಸರಕಾರ 1-5ನೇ ತರಗತಿಯ ವಿದ್ಯಾರ್ಥಿಗಳಿಗೆ 265 ರೂ., 6-8ನೇ ತರಗತಿವರೆಗೆ 295 ರೂ. ಮತ್ತು 9-10ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂ. ಮೊತ್ತ ನಿಗದಿಪಡಿಸಿದೆ. ಶೂ, ಸಾಕ್ಸ್ ಖರೀದಿಗಾಗಿ ಹಣ ಬಿಡುಗಡೆ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ. ಉಳಿದ ಮೊತ್ತ ಶೀಘ್ರ ಬಿಡುಗಡೆಯಾಗಲಿದೆ. ಶೈಲಜಾ, ಕ್ಷೇತ್ರ ಶಿಕ್ಷಣಾಧಿಕಾರಿ, ಬೆಂಗಳೂರು ಉತ್ತರ ವಲಯ-4 ಈವರೆಗೆ ಶೇ.50ರಷ್ಟು ಹಣ ಬಿಡುಗಡೆಯಾಗಿದೆ. ಉಳಿದ ಮೊತ್ತವೂ ಶೀಘ್ರ ಬಿಡುಗಡೆಯಾಗಲಿದೆ.
ಬಿಡುಗಡೆಯಾದ ಹಣ ನೇರವಾಗಿ ಶಾಲಾಭಿವೃದ್ದಿ ಸಮಿತಿ ಖಾತೆಗೆ ಜಮಾ ಆಗುತ್ತದೆ. ಈ ಪ್ರಕ್ರಿಯೆಯಲ್ಲಿ ನಮ್ಮ ಅಧಿಕಾರಿಗಳ ಪಾತ್ರ ಸೀಮಿತ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಉತ್ತರ ಜಿಲ್ಲೆ ಡಿಡಿಪಿಐ ಆಂಜಿನಪ್ಪ ಹೇಳಿದ್ದಾರೆ. ನಾನಾ ಭಾಗ್ಯಗಳ ಹೆಸರಿನಲ್ಲಿ ಹಲವು ಯೋಜನೆಗಳನ್ನು ಘೋಷಣೆ ಮಾಡುವ ಸರಕಾರಕ್ಕೆ ಶಾಲಾ ಮಕ್ಕಳಿಗೆ ಸಕಾಲಕ್ಕೆ ಶೂ, ಸಾಕ್ಸ್ ಕೊಡಿಸಬೇಕು ಎಂಬ ಕಾಳಜಿ ಇಲ್ಲ. ಇದು ಅಭಿವೃದ್ಧಿಯ ಗುರುತು ಅಲ್ಲ, ನಿರ್ಲಕ್ಷ್ಯದ ನಿಜಮುಖ.”

Leave a comment