“ಅಮೃತಸರದ ಠಾಕೂರ್ ದ್ವಾರ್ ದೇವಾಲಯದ ಮೇಲೆ ಗ್ರೆನೇಡ್ ಸ್ಫೋಟಿಸಿದ್ದ ಪ್ರಮುಖ ಆರೋಪಿ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತನನ್ನು ಅಮೃತಸರದ ಬಾಲ್ ಗ್ರಾಮದ ನಿವಾಸಿ ಜಗ್ಜಿತ್ ಸಿಂಗ್ ಅವರ ಪುತ್ರ ಗುರ್ಸಿದಕ್ ಎಂದು ಗುರುತಿಸಲಾಗಿದೆ.
ಶುಕ್ರವಾರ ಮಧ್ಯರಾತ್ರಿ ಅಮೃತಸರದಲ್ಲಿ ಬೈಕ್ನಲ್ಲಿ ಬಂದ ಅಪರಿಚಿತ ದಾಳಿಕೋರನೊಬ್ಬ ಸ್ಫೋಟಕ ಸಾಧನವನ್ನು ಕಟ್ಟಡದ ಕೆಳಗೆ ಎಸೆದಿದ್ದ. ಬಳಿಕ ಸ್ಫೋಟ ಸಂಭವಿಸಿತ್ತು. ಸ್ಫೋಟದಿಂದಾಗಿ ಗೋಡೆಯ ಒಂದು ಭಾಗಕ್ಕೆ ಹಾನಿಯಾಗಿತ್ತು, ಕಿಟಕಿ ಗಾಜುಗಳು ಒಡೆದಿದ್ದವು.
ಘಟನೆಯು ಸ್ಥಳೀಯ ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿತ್ತು. ಘಟನೆಯಲ್ಲಿ ಯಾರಿಗೂ ಸಾವು-ನೋವುಗಳು ಸಂಭವಿಸಿರಲಿಲ್ಲ. ಆದರೆ, ಸ್ಫೋಟದಿಂದ ಸ್ಥಳೀಯರು ಆತಂಕಗೊಂಡಿದ್ದರು. ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದರು.
ಇದರಂತೆ. ಗ್ರೆನೇಡ್ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತರು ರಾಜಸಾನ್ಸಿ ಪ್ರದೇಶದಲ್ಲಿರುವ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಬಳಿಕ ಆರೋಪಿಗಳನ್ನು ಬಂಧಿಸಲು ಸಿಐಎ ಮತ್ತು ಎಸ್ಎಚ್ಒ ಛೆಹರ್ತಾದಿಂದ ಸಮರ್ಪಿತ ತಂಡಗಳನ್ನು ನಿಯೋಜಿಸಲಾಗಿದೆ.
ಪೊಲೀಸರು ಶಂಕಿತರು ಹೋಗುತ್ತಿದ್ದ ಬೈಕ್ಅನ್ನು ತಡೆಯಲು ಪ್ರಯತ್ನಿಸಿದಾಗ, ಆರೋಪಿಗಳು ತಮ್ಮ ವಾಹನವನ್ನು ಬಿಟ್ಟು ಸಮೀಪಿಸುತ್ತಿದ್ದ ತಂಡದ ಮೇಲೆ ಗುಂಡು ಹಾರಿಸಿದರು. ಘರ್ಷಣೆಯ ಸಮಯದಲ್ಲಿ, ಹೆಡ್ ಕಾನ್ಸ್ಟೆಬಲ್ ಗುರುಪ್ರೀತ್ ಸಿಂಗ್ ಅವರ ಎಡಗೈಗೆ ಗುಂಡು ತಗುಲಿದೆ
. ಮತ್ತೊಂದು ಗುಂಡು ಇನ್ಸ್ಪೆಕ್ಟರ್ ಅಮೋಲಕ್ ಸಿಂಗ್ ಅವರ ಪೇಟಕ್ಕೆ ತಗುಲಿತು. ಮೂರನೇ ಸುತ್ತಿನ ಗುಂಡು ಪೊಲೀಸ್ ವಾಹನಕ್ಕೆ ತಗುಲಿ, ಪರಿಸ್ಥಿತಿಯ ತೀವ್ರತೆಯನ್ನು ಹೆಚ್ಚಿದೆ. ಬಳಿಕ ಆತ್ಮರಕ್ಷಣೆಯ ಸಲುವಾಗಿ, ಇನ್ಸ್ಪೆಕ್ಟರ್ ವಿನೋದ್ ಕುಮಾರ್ ಗುಂಡು ಹಾರಿಸಿ ಪ್ರಮುಖ ಆರೋಪಿಯನ್ನು ಗಾಯಗೊಳಿಸಿದರು.
ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಇತರೆ ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ಪಂಜಾಬ್ ಪೊಲೀಸ್ ಮುಖ್ಯಸ್ಥ ಗೌರವ್ ಯಾದವ್ ಮಾಹಿತಿ ನೀಡಿದ್ದಾರೆ.
ಈ ದಾಳಿಯಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಪಾತ್ರವಿದೆ ಎಂದು ಶಂಕಿಸಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ