ಮೂಡಲಗಿ (ಬೆಳಗಾವಿ): ಕಬ್ಬು ಬೆಳೆಗಾರರ ಹೋರಾಟದ ಕಿಚ್ಚನ್ನು ಇಲ್ಲೇ ಆರಿಸದಿದ್ದರೆ, ಇಡೀ ರಾಜ್ಯ ವ್ಯಾಪಿಸಲಿದೆ: ವಿಜಯೇಂದ್ರ ಎಚ್ಚರಿಕೆ ಕಬ್ಬು ದರ ನಿಗದಿಗೆ ಆಗ್ರಹಿಸಿ ಗುರ್ಲಾಪುರ ಕ್ರಾಸ್ನಿಂದ ಆರಂಭವಾದ ರೈತರ ಪ್ರತಿಭಟನೆಯ ಕಿಡಿ ಈಗ ಜಿಲ್ಲಾದ್ಯಂತ ವ್ಯಾಪಿಸಿದೆ. ನ್ಯಾಯಯುತ ಬೆಲೆ ಪಡೆದೇ ತೀರುವ ನಿಟ್ಟಿನಲ್ಲಿ ಕಬ್ಬು ಬೆಳೆಗಾರರು ರೈತ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಜಿಲ್ಲೆಯ ನಾನಾ ತಾಲೂಕು ಕೇಂದ್ರ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ರೈತರ ಪ್ರತಿರೋಧ ತೀವ್ರಗೊಳ್ಳುತ್ತಿದ್ದು, ಮಂಗಳವಾರ ಬಿಜೆಪಿ ಕೂಡ ಈ ಪ್ರತಿಭಟನೆಗೆ ಧುಮುಕಿದೆ.
ಇಲ್ಲದೇ ಇದ್ದರೆ ಈ ರೈತರ ಹೋರಾಟ ರಾಜ್ಯದಾದ್ಯಂತ ವ್ಯಾಪಿಸಲಿದೆ ಎಂದು ಎಚ್ಚರಿಕೆ ನೀಡಿದ ವಿರೋಧ ಪಕ್ಷದ ನಾಯಕ ಮಹಾರಾಷ್ಟ್ರದಲ್ಲಿ ಟನ್ ಕಬ್ಬಿಗೆ 3400 ರೂ. ನೀಡುವಾಗ ಇಲ್ಲಿ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಬಿವೈವಿ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ನಲ್ಲಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪಾಲ್ಗೊಂಡರು
ರೈತರು ಬೀದಿಗಿಳಿದು ಮಾಡುತ್ತಿರುವ ಹೋರಾಟದ ಕಿಚ್ಚನ್ನು ಇಲ್ಲೇ ಆರಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕು. ಇಲ್ಲವಾದರೆ ಈ ಕಿಚ್ಚು ಇಡೀ ರಾಜ್ಯ ವ್ಯಾಪಿಸಲಿದೆ. ಇದಕ್ಕೆ ಅವಕಾಶ ಮಾಡಿಕೊಡದೆ ತಕ್ಷಣ ರಾಜ್ಯ ಸರಕಾರ ಕಬ್ಬಿಗೆ ಯೋಗ್ಯ ದರ ಘೋಷಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದರು. ಕಬ್ಬಿನ ದರ ನಿಗದಿಗಾಗಿ ಗುರ್ಲಾಪುರ್ ಕ್ರಾಸ್ ಬಳಿ ರೈತರು ನಡೆಸುತ್ತಿರುವ ಹೋರಾಟದ ಆರನೇ ದಿನವಾದ ಮಂಗಳವಾರ ಪಾಲ್ಗೊಂಡು ಅವರು ಮಾತನಾಡಿದರು.

”ಕಬ್ಬಿನ ದರ ನಿಗದಿಗಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ರಾಜ್ಯ ಸರಕಾರ ತಕ್ಷಣ ಸ್ಪಂದಿಸಬೇಕು. ಇಲ್ಲವಾದರೆ ನ್ಯಾಯ ಸಿಗುವವರೆಗೂ ರೈತರ ಹೋರಾಟದಲ್ಲಿ ನಾನು ಭಾಗಿಯಾಗುತ್ತೇನೆ. ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಥವಾ ಶಿಕಾರಿಪುರದ ಶಾಸಕನಾಗಿ ಇಲ್ಲಿಗೆ ಬಂದಿಲ್ಲ. ರೈತರ ಜತೆಗೆ ನಿರಂತರವಾಗಿ ಹೋರಾಟ ಮಾಡಿದ ಯಡಿಯೂರಪ್ಪ ಅವರ ಮಗನಾಗಿ ಬಂದಿದ್ದೇನೆ. ಆದರೆ, ಆರು ದಿನಗಳಿಂದ ರೈತರು ಮಾಡುತ್ತಿರುವ ಹೋರಾಟದ ಸ್ಥಳಕ್ಕೆ ಜನಪ್ರತಿನಿಧಿಗಳು ಬಂದಿಲ್ಲ.
ಇದು ಲಜ್ಜೆಗೆಟ್ಟ ಸರಕಾರ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ”ಎಫ್ಆರ್ಪಿ ದೇಶಾದ್ಯಂತ ಇದೆ. ಮಹಾರಾಷ್ಟ್ರದಲ್ಲಿ ಟನ್ ಕಬ್ಬಿಗೆ 3400 ರೂ. ನೀಡುತ್ತಿದ್ದಾರೆ ಎಂದರೆ ರಾಜ್ಯದಲ್ಲಿ ಏಕೆ ಕೊಡುತ್ತಿಲ್ಲ. ರೈತರ ಮೇಲೆ ಕಾಳಜಿ ಇರುವಂತ ಸರಕಾರ ರಾಜ್ಯದಲ್ಲಿ ಇದ್ದಿದ್ದರೆ ಕಾರ್ಖಾನೆಗಳು ಪ್ರಾರಂಭವಾಗುವುದಕ್ಕಿಂತಲೂ ಮೊದಲೇ ರೈತ ಮುಖಂಡರ ಹಾಗೂ ಕಾರ್ಖಾನೆ ಮಾಲೀಕರ ಸಭೆ ನಡೆಸಿ ದರ ನಿಗದಿ ಮಾಡಬೇಕಿತ್ತು,” ಎಂದು ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟರು.

ರೈತರ ಬೃಹತ್ ಪ್ರತಿಭಟನಾ ಸಭೆಯಲ್ಲಿ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಮಾಜಿ ಶಾಸಕ ಪಿ. ರಾಜು, ವಿಶ್ವನಾಥ್ ಪಾಟೀಲ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಸ್ ಪಾಟೀಲ್, ಮಾಜಿ ಜಿಪಂ ಸದಸ್ಯ ಗೋವಿಂದ ಕೊಪ್ಪದ, ಅಡಿಗನಾಳದ ಮುತೇಶ್ವರ ಸ್ವಾಮೀಜಿ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.
ಪ್ರತಿಭಟನಾ ಸ್ಥಳದಲ್ಲೇ ಮಲಗಿದ ವಿಜಯೇಂದ್ರ ರೈತರ ಆಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡ ವಿಜಯೇಂದ್ರ, ಪ್ರತಿಭಟನಾ ಜಾಗದಲ್ಲೇ ರಾತ್ರಿ ಕಳೆದರು. “ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಭಾಗಗಳ ಕಬ್ಬು ಬೆಳೆಗಾರ ರೈತರು ಬೆವರ ಪರಿಶ್ರಮಕ್ಕೆ ತಕ್ಕ ಬೆಲೆಗಾಗಿ ನ್ಯಾಯದ ಸೆರಗೊಡ್ಡಿ ನಿಂತಿದ್ದಾರೆ. ಅವರೊಂದಿಗೆ ದನಿ ಗೂಡಿಸುವುದು ನನ್ನ ಪಾಲಿನ ಶ್ರೇಷ್ಠ ಕರ್ತವ್ಯ,” ಎಂದಿದ್ದಾರೆ.”

Leave a comment