ಹೊಸದಿಲ್ಲಿ : ‘ಡಿಜಿಟಲ್ ಅರೆಸ್ಟ್’ ಹಗರಣಗಳ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ಸೈಬರ್ ವಂಚನೆ ತನಿಖೆಯನ್ನು ಸಿಬಿಐಗೆ ವಹಿಸಲು ನ್ಯಾಯಾಲಯದ ಒಲವು ಗಡಿಯಾಚೆಯಿಂದ ಕಾರ್ಯನಿರ್ವಹಿಸುತ್ತಿರುವ ಸಂಘಟಿತ ವಂಚಕರ ಜಾಲ ಎಐ ತಂತ್ರಜ್ಞಾನ ಬಳಸಿ ಅಮಾಯಕರನ್ನು ಬೆದರಿಸುತ್ತಿರುವ ಸೈಬರ್ ಕಳ್ಳರು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದ ಕೋರ್ಟ್ ಡಿಜಿಟಲ್ ಅರೆಸ್ಟ್ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ದೇಶಾದ್ಯಂತ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ಎಂಬ ಸೈಬರ್ ವಂಚನೆ ಹಾವಳಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಈ ಪ್ರಕರಣಗಳ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸುವ ಕುರಿತು ಚಿಂತನೆ ನಡೆಸಿದೆ. ನ್ಯಾಯಾಧೀಶರು ಮತ್ತು ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ನಕಲಿ ದಾಖಲೆಗಳನ್ನು ಬಳಸಿ ವಂಚಕರು ನಡೆಸುತ್ತಿರುವ ಈ ಕೃತ್ಯಗಳ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸೋಮವಾರ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಅವರಿದ್ದ ಪೀಠದ ಮುಂದೆ ನಡೆದ ವಿಚಾರಣೆ ಸಂದರ್ಭದಲ್ಲಿ, “ಹಲವು ರಾಜ್ಯಗಳಲ್ಲಿ ಡಿಜಿಟಲ್ ಬಂಧನಗಳು ನಡೆಯುತ್ತಿದ್ದು, ಜನರು ದಿಕ್ಕೆಟ್ಟಿದ್ದಾರೆ. ಅಪರಾಧದ ಪ್ರಮಾಣ ಮತ್ತು ಸ್ವರೂಪವನ್ನು ಗಮನಿಸಿದರೆ, ಈ ಪ್ರಕರಣಗಳ ಎಫ್ಐಆರ್ಗಳನ್ನು ಸಿಬಿಐನಂತಹ ಕೇಂದ್ರ ಸಂಸ್ಥೆಗೆ ನೀಡುವುದು ಸೂಕ್ತ,” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಮೌಖಿಕವಾಗಿ ಹೇಳಿದರು.

ಈ ಸೈಬರ್ ಅಪರಾಧಗಳು ಗಡಿಯಾಚೆಯಿಂದ ಹುಟ್ಟಿಕೊಳ್ಳುತ್ತವೆ ಮತ್ತು ಇವುಗಳ ಹಿಂದೆ ಹಣ ವರ್ಗಾವಣೆ ಜಾಲಗಳಿವೆ ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಇದು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಸಂಘಟಿತ ಅಪರಾಧ ಎಂದು ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.
ಡಿಜಿಟಲ್ ಅರೆಸ್ಟ್ ಹೇಗಿರುತ್ತೆ? ಏನೆಲ್ಲಾ ಆಗುತ್ತೆ? ನಿಮ್ಮ ದುಡ್ಡು ಉಳಿಸಿಕೊಳ್ಳೋಕೆ ಏನೆಲ್ಲಾ ಮಾಡ್ಬೇಕು? ಇಲ್ಲಿದೆ ಗೈಡ್? ಹರಿಯಾಣದ ಅಂಬಾಲಾದಲ್ಲಿ ಹಿರಿಯ ನಾಗರಿಕ ದಂಪತಿಯನ್ನು ಗುರಿಯಾಗಿಸಿ, ನಕಲಿ ಆದೇಶಗಳನ್ನು ಬಳಸಿ 1.05 ಕೋಟಿ ರೂ. ಸುಲಿಗೆ ಮಾಡಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿತ್ತು. ಕೃತಕ ಬುದ್ಧಿಮತ್ತೆ (ಎಐ) ಮತ್ತು ಇತರ ಸುಧಾರಿತ ತಂತ್ರಜ್ಞಾನ ಬಳಸಿ ನ್ಯಾಯಾಲಯದ ಕೊಠಡಿಗಳು ಹಾಗೂ ಪೊಲೀಸ್ ಠಾಣೆಗಳ ನಕಲಿ ದೃಶ್ಯ ಸೃಷ್ಟಿಸಿ, ‘ಸೈಬರ್ ಅರೆಸ್ಟ್’ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿರುವ ಹಲವು ಪ್ರಕರಣಗಳು ದೇಶಾದ್ಯಂತ ವರದಿಯಾಗಿರುವುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು.

ಈ ವೇಳೆ, ಇಷ್ಟೊಂದು ದೊಡ್ಡ ಪ್ರಮಾಣದ ಸೈಬರ್ ಅಪರಾಧ ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐ ಬಳಿ ಸಾಕಷ್ಟು ಮಾನವ ಮತ್ತು ತಾಂತ್ರಿಕ ಸಂಪನ್ಮೂಲಗಳಿವೆಯೇ ಎಂದು ನ್ಯಾಯಮೂರ್ತಿ ಬಾಗ್ಚಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತುಷಾರ್ ಮೆಹ್ತಾ, ಈ ಬಗ್ಗೆ ಈಗಾಗಲೇ ಸಿಬಿಐ ಮತ್ತು ಗೃಹ ಸಚಿವಾಲಯದ ಸೈಬರ್ ಕ್ರೈಂ ವಿಭಾಗದೊಂದಿಗೆ ಚರ್ಚಿಸಿದ್ದು, ತನಿಖೆಯ ವಿವರಗಳಿರುವ ಗೌಪ್ಯ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಅಂತಿಮವಾಗಿ, ನ್ಯಾಯಪೀಠವು ಈ ಸ್ವಯಂ ಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದೆ. ತಮ್ಮ ವ್ಯಾಪ್ತಿಯಲ್ಲಿ ವರದಿಯಾದ ಬಾಕಿ ಇರುವ ಎಫ್ಐಆರ್ಗಳು ಮತ್ತು ‘ಸೈಬರ್ ಬಂಧನ’ಗಳ ವಿವರಗಳನ್ನು ಒದಗಿಸುವಂತೆ ನಿರ್ದೇಶಿಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 3ಕ್ಕೆ ನಿಗದಿಪಡಿಸಲಾಗಿದೆ.”

Leave a comment