ಮುಂಬೈ : ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್ನ ಆಜೀವ ಉಪಾಧ್ಯಕ್ಷರಾಗಿ ವೇಣು ಶ್ರೀನಿವಾಸನ್ ಮರುನೇಮಕ
ಜನವರಿ 2025ರಲ್ಲಿ ನೋಯೆಲ್ ಟಾಟಾ ಅವರನ್ನು ಆಜೀವ ಅಧ್ಯಕ್ಷರಾಗಿ ನೇಮಕ ಮಾಡಿದ ನಂತರ ನಡೆದಿದೆ ಈ ಬೆಳವಣಿಗೆ
ಅಕ್ಟೋಬರ್ 2024ರ ನಿರ್ಣಯದ ಪ್ರಕಾರ, ಟ್ರಸ್ಟಿಗಳ ಅಧಿಕಾರಾವಧಿ ಮುಗಿದ ನಂತರ ಅವರನ್ನು ಆಜೀವ ಅವಧಿಗೆ ಮರುನೇಮಕ
ಟಾಟಾ ಸನ್ಸ್ನಲ್ಲಿ ಶೇ. 52ರಷ್ಟು ಪಾಲನ್ನು ಹೊಂದಿವೆ ಎಸ್ಡಿಟಿಟಿ ಮತ್ತು ಎಸ್ಆರ್ಟಿಟಿ ಟ್ರಸ್ಟ್ಗಳು
ಟಾಟಾ ಸಮೂಹದ ಪ್ರಮುಖ ಟ್ರಸ್ಟ್ಗಳಾದ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ (ಎಸ್ಡಿಟಿಟಿ) ಮತ್ತು ಸರ್ ರತನ್ ಟಾಟಾ ಟ್ರಸ್ಟ್ (ಎಸ್ಆರ್ಟಿಟಿ)ಗಳ ಉಪಾಧ್ಯಕ್ಷರಾಗಿ ವೇಣು ಶ್ರೀನಿವಾಸನ್ ಅವರನ್ನು ಆಜೀವ ಅವಧಿಗೆ ಮರುನೇಮಕ ಮಾಡಲಾಗಿದೆ. ಸೋಮವಾರ ನಡೆದ ಸಭೆಯಲ್ಲಿ ಟ್ರಸ್ಟಿಗಳು ಈ ನಿರ್ಧಾರಕ್ಕೆ ಅನುಮೋದನೆ ನೀಡಿದ್ದು, ಆಡಳಿತಾತ್ಮಕ ವಿಚಾರಗಳಲ್ಲಿನ ಇತ್ತೀಚಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿದ್ದಾರೆ.
ಈ ಹಿಂದೆ ಜನವರಿ 2025ರಲ್ಲಿ, ಟ್ರಸ್ಟ್ನ ಅಧ್ಯಕ್ಷರಾದ ನೋಯೆಲ್ ಟಾಟಾ ಅವರನ್ನೂ ಯಾವುದೇ ಅಧಿಕಾರಾವಧಿ ಮಿತಿಯಿಲ್ಲದೆ ಮರುನೇಮಕ ಮಾಡಲಾಗಿತ್ತು. ಟಾಟಾ ಸನ್ಸ್ನಲ್ಲಿ ಈ ಎರಡು ಟ್ರಸ್ಟ್ಗಳು ಒಟ್ಟಾಗಿ ಶೇ. 52ರಷ್ಟು ಷೇರುಗಳನ್ನು ಹೊಂದಿವೆ. ಸಹ ಟ್ರಸ್ಟಿ ಮೆಹ್ಲಿ ಮಿಸ್ತ್ರಿ ಅವರ ಮರುನೇಮಕವೂ ಮುಂದಿನ ಕೆಲವು ದಿನಗಳಲ್ಲಿ ನಡೆಯುವ ನಿರೀಕ್ಷೆಯಿದೆ.

ವೇಣು ಶ್ರೀನಿವಾಸನ್ ಅವರ ಮರುನೇಮಕ ಅನಿರೀಕ್ಷಿತವೇನಾಗಿರಲಿಲ್ಲ. ಅಕ್ಟೋಬರ್ 17, 2024ರಂದು ಟ್ರಸ್ಟ್ಗಳು ಸರ್ವಾನುಮತದಿಂದ ನಿರ್ಣಯವೊಂದನ್ನು ಅಂಗೀಕರಿಸಿದ್ದವು. ಅದರ ಪ್ರಕಾರ, “ಯಾವುದೇ ಟ್ರಸ್ಟಿಯ ಅಧಿಕಾರಾವಧಿ ಮುಗಿದ ನಂತರ, ಆ ಟ್ರಸ್ಟಿಯನ್ನು ಸಂಬಂಧಪಟ್ಟ ಟ್ರಸ್ಟ್ ಯಾವುದೇ ಅವಧಿಯ ಮಿತಿಯಿಲ್ಲದೆ ಮರುನೇಮಕ ಮಾಡುತ್ತದೆ,” ಎಂದು ಹೇಳಲಾಗಿತ್ತು.
ಟಾಟಾ ಗ್ರೂಪ್ನಲ್ಲಿ ಮುಂದುವರೆದ ಬಿಕ್ಕಟ್ಟು: ಸಂಬಂಧಿಕರ ನಡುವೆ ಮೂಡದ ಒಮ್ಮತ! 7 ಗಂಟೆ ಸಭೆ ವಿಫಲ, ಆರ್ಬಿಐ ನಿರ್ಧಾರದತ್ತ ಎಲ್ಲರ ಚಿತ್ತ!
ಈ ನಿರ್ಣಯದ ಪ್ರಕಾರ, ಒಬ್ಬ ಟ್ರಸ್ಟಿಯ ಮರುನೇಮಕದ ವಿರುದ್ಧ ಮತ ಚಲಾಯಿಸುವ ಯಾವುದೇ ಟ್ರಸ್ಟಿಯನ್ನು ಬದ್ಧತೆಯ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಎಸ್ಡಿಟಿಟಿ ಮತ್ತು ಎಸ್ಆರ್ಟಿಟಿಯಲ್ಲಿನ ಎಲ್ಲಾ ಟ್ರಸ್ಟಿಗಳು ಆಜೀವ ಅವಧಿಗೆ ಸೇವೆ ಸಲ್ಲಿಸುವುದು ಖಚಿತವಾಗಿದೆ.

ಈ ಹಿಂದೆಯೂ ಜೆಆರ್ಡಿ ಟಾಟಾ, ರತನ್ ಟಾಟಾ, ಜೆಮ್ಶೆಡ್ ಭಾಭಾ ಮತ್ತು ಆರ್ಕೆ ಕೃಷ್ಣ ಕುಮಾರ್ ಅವರಂತಹ ಟ್ರಸ್ಟಿಗಳು ತಮ್ಮ ನಿಧನದವರೆಗೂ ಟ್ರಸ್ಟಿಗಳಾಗಿ ಮುಂದುವರಿದಿದ್ದರು. ನೋಶೀರ್ ಸೂನಾವಾಲಾ ಅವರಂತಹ ಕೆಲವರು ಅನಾರೋಗ್ಯ ಮತ್ತು ಇಳಿ ವಯಸ್ಸಿನ ಕಾರಣದಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಉದಾಹರಣೆಗಳೂ ಇವೆ.
ಇತ್ತೀಚೆಗೆ ಟ್ರಸ್ಟಿಗಳ ನಡುವಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಚರ್ಚೆಗೆ ಬಂದಿದ್ದವು. ಟಾಟಾ ಸನ್ಸ್ ಮಂಡಳಿಯಲ್ಲಿ 75 ವರ್ಷ ಪೂರೈಸಿದ ನಾಮನಿರ್ದೇಶಿತ ನಿರ್ದೇಶಕರ ಮರು ನೇಮಕ ಸಂಬಂಧ ಈ ಭಿನ್ನಾಭಿಪ್ರಾಯ ಸ್ಫೋಟಗೊಂಡಿತ್ತು. ಇದರ ಪರಿಣಾಮವಾಗಿ, ವಿಜಯ್ ಸಿಂಗ್ ಅವರು ಬಹುಪಾಲು ಟ್ರಸ್ಟಿಗಳ ಬೆಂಬಲವಿಲ್ಲದೆ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಸಿಂಗ್ ಅವರ ಸ್ಥಾನಕ್ಕೆ ಮೆಹ್ಲಿ ಮಿಸ್ತ್ರಿ ಅವರನ್ನು ಸೂಚಿಸಲಾಯಿತಾದರೂ, ಅಧ್ಯಕ್ಷ ನೋಯೆಲ್ ಟಾಟಾ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.

Leave a comment