“ಹೋಟೆಲ್ ಹೊರಗೆ ನಿಲುಗಡೆ ಮಾಡಿದ್ದ ಕಾರೊಂದರ ನಾಲ್ಕು ಚಕ್ರಗಳನ್ನು ದುಷ್ಕರ್ಮಿಗಳು ಬಿಚ್ಚಿ, ಹೊತ್ತೊಯ್ದಿರುವ ಘಟನೆಯೊಂದು ಗಾಂಧಿನಗರದ 2ನೇ ಮುಖ್ಯ ರಸ್ತೆಯಲ್ಲಿ ಭಾನುವಾರ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ,
ಮಾ.15ರಂದು ತಡರಾತ್ರಿ ಸುಮಾರು 12ಕ್ಕೆ ಗಾಂಧಿನಗರ 2ನೇ ಮುಖ್ಯರಸ್ತೆಯ ವನುಷ ಹೋಟೆಲ್ ಎದುರು ಈ ಘಟನೆ ನಡೆದಿದೆ.
ಹುಬ್ಬಳ್ಳಿ ನವನಗರ ನಿವಾಸಿ ಗೋವಿಂದಪ್ಪ (52) ನೀಡಿದ ದೂರಿನ ಮೇರೆಗೆ ಉಪ್ಪಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರುದಾರ ಗೋವಿಂದಪ್ಪ ಕಾರ್ಯ ನಿಮಿತ್ತ ಸ್ನೇಹಿತ ಜತೆಗೆ ಮಾ.14ರ ರಾತ್ರಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಸ್ನಲ್ಲಿ ಬಂದಿದ್ದಾರೆ. ಮಾರನೇ ದಿನ ಬೆಂಗಳೂರಿನಲ್ಲಿ ಕಾರ್ಯ ನಿಮಿತ್ತ ಸುತ್ತಾಡಲು ತಮ್ಮ ಸಂಬಂಧಿಕನಕಾರನ್ನು ಪಡೆದುಕೊಂಡಿದ್ದಾರೆ.
ಬಳಿಕ ನಗರದಲ್ಲಿ ಸುತ್ತಾಡಿ ರಾತ್ರಿ ಗಾಂಧಿನಗರದ 2ನೇ ಮುಖ್ಯರಸ್ತೆಯ ವನುಷ ಹೋಟೆಲ್ ನಲ್ಲಿ ರೂಮ್ ಬಾಡಿಗೆ ಪಡೆದು ತಂಗಿದ್ದಾರೆ. ಈ ವೇಳೆ ಕಾರನ್ನು ಹೋಟೆಲ್ ಎದುರಿನ ರಸ್ತೆ ಬದಿ ನಿಲುಗಡೆ ಮಾಡಿದ್ದಾರೆ.
ಮಾರನೇ ದಿನ ಎದ್ದು ನೋಡಿದಾಗ ದುಷ್ಕರ್ಮಿಗಳು ಕಾರಿನ ನಾಲ್ಕು ಚಕ್ರಗಳನ್ನು ಬಿಚ್ಚಿ ಕಳವು ಮಾಡಿ ಪರಾರಿ ಆಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕುತೂಹಲಕಾರಿ ವಿಚಾರವೆಂದರೆ ಇಡೀ ಘಟನೆಯನ್ನು ಅದೇ ಹೋಟೆಲ್ನಲ್ಲಿ ತನ್ನ ಕುಟುಂಬದೊಂದಿಗೆ ತಂಗಿದ್ದ 15 ವರ್ಷದ ಬಾಲಕ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಆರೋಪಿಗಳು ಕಾರಿನ ಟೈರ್ ಬದಲಾಯಿಸುತ್ತಿದ್ದಾರೆಂದು ಭಾವಿಸಿದ ಯುವಕರ ಈ ವಿಚಾರವನ್ನು ಯಾರಿಗೂ ಹೇಳಿಲ್ಲ.
ಪೊಲೀಸರು ಸ್ಥಳಕ್ಕೆ ಬಂದಾಗ ವಿಚಾರ ತಿಳಿದ ಬಾಲಕ ಪೊಲೀಸರಿಗೆ ವೀಡಿಯೋವನ್ನು ನೀಡಿದ್ದಾನೆ. ಇದಲ್ಲದೆ, ಘಟನೆಯ ವಿಡಿಯೋ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲೂ ಸೆರೆಯಾಗಿದೆ.
ದುಷ್ಕರ್ಮಿಗಳು ಇನ್ನೋವಾ ಕಾರಿನಲ್ಲಿ ಸ್ಥಳಕ್ಕೆ ಬಂದಿರುವುದು ಕಂಡು ಬಂದಿದ್ದು, ಕಾರಿನ ಕೆಳಗೆ ಕಲ್ಲುಗಳನ್ನು ಇಟ್ಟು ನಾಲ್ಕೂ ಚಕ್ರಗಳನ್ನು ತೆಗೆದಿರುವುದು ಕಂಡು ಬಂದಿದೆ. ಸ್ಥಳದಿಂದ ಕಾರು ತೆಗೆಯಲು ಸುಮಾರು 96,000 ರೂ. ವ್ಯಯಿಸಿ ಚಕ್ರಗಳನ್ನು ಖರೀದಿಸಬೇಕಾಯಿತು.
ದುಷ್ಕರ್ಮಿಗಳ ಕಾರಿನ ನೋಂದಣಿ ಸಂಖ್ಯೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ ಎಂದು ದೂರುದಾರ ಗೋವಿಂದಪ್ಪ ಅವರು ಹೇಳಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ