“ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಂಡಿತವಾಗಿಯೂ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಬಿಜೆಪಿ ಬಂಡಾಯ ನಾಯಕ ಮತ್ತು ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಖ್ಯಾತ ಜ್ಯೋತಿಷಿ ದ್ವಾರಕನಾಥ್ ಅವರು ಸುಮಾರು 25 ವರ್ಷಗಳ ಹಿಂದೆಯೇ ಶಿವಕುಮಾರ್ ಭವಿಷ್ಯದಲ್ಲಿ ಜೈಲಿಗೆ ಹೋಗುತ್ತಾರೆ ಆನಂತರ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು ಎಂದು ಹೇಳಿದರು.
ಶಿವಕುಮಾರ್ ಜೈಲುವಾಸದ ಅವರ ಮೊದಲ ಭವಿಷ್ಯವಾಣಿ ಈಗಾಗಲೇ ನಿಜವಾಗಿದೆ. ಅವರು ಮುಂದಿನ ಸಿಎಂ ಆಗುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದರು.
ಡಿಕೆ ಶಿವಕುಮಾರ್ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದನ್ನು ಲೇವಡಿ ಮಾಡಿದ್ದ ವಿಜಯಪುರ ಶಾಸಕ ಯತ್ನಾಳ್ ವಿರುದ್ಧ ಶಾಸಕ ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯತ್ನಾಳ್ ಅವರದ್ದು ನೋಡಿಕೊಳ್ಳಲಿ. ಡಿಕೆ ಶಿವಕುಮಾರ್ಗೂ ಯತ್ನಾಳ್ ಗೂ ಏನು ಸಂಬಂಧ?ಶಿವಕುಮಾರ್ ಅವರು, ಯತ್ನಾಳ್ ವಿರುದ್ಧ ಕನಕಪುರದಲ್ಲಿ ಕೇಸ್ ಹಾಕಿದ್ದಾರೆ
. ಮೊದಲು ಯತ್ನಾಳ್ ಗೆ ಆ ಕೇಸ್ ಅಟೆಂಡ್ ಮಾಡಲು ಹೇಳಿ. ಡಿಕೆ ಶಿವಕುಮಾರ್ ಅವರನ್ನು ಟೀಕೆ ಮಾಡುವ ಬದಲು ನಿನ್ನದೇ ನೂರೆಂಟು ಇದೆ ಅದನ್ನು ನೋಡಿಕೋ ಎಂದರು.
ಡಿಕೆಶಿಯನ್ನು ಹೊಗಳುವ ತೆಗಳುವ ಕೆಲಸ ನಿನ್ನದಲ್ಲ. ಈಗ ವಕ್ಫ್, ವಿಜಯೇಂದ್ರ ಬಗ್ಗೆ ಏನೋ ಮಾಡ್ತಾ ಇದ್ದೀಯಲ್ಲ ಅದನ್ನು ನೆಮ್ಮದಿಯಾಗಿ ಮಾಡು. ಡಿಕೆ ಶಿವಕುಮಾರ್ ಬಗ್ಗೆ ನೀನು ಯಾಕೆ ತಲೆಕೆಡಿಸಿಕೊಳ್ಳುತ್ತೀಯ?
ಅವರು ಟೆಂಪಲ್ ಗೆ ಹೋಗ್ತಾರೋ, ಜ್ಯೋತಿಷಿ ಬಳಿ ಹೋಗ್ತಾರೋ ನಿನಗ್ಯಾಕೆ ಅದು. ಅದು ಅವರ ಹಣೆಬರಹ. ನಿನಗೆ ಡಿಕೆಶಿ ಬಗ್ಗೆ ಪದೇ ಪದೆ ಮಾತನಾಡಲು ಯಾರು ಹೇಳಿದ್ದು? ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ವಿಜಯೇಂದ್ರ ಒಬ್ಬ ಹುಟ್ಟು ಹೋರಾಟಗಾರ. ಅವರನ್ನು ತುಂಬಾ ವರ್ಷದಿಂದ ಹತ್ತಿರದಿಂದ ನೋಡಿದ್ದೇನೆ. ಉಪಚುನಾವಣೆಯಲ್ಲಿ ಎಲ್ಲೆಲ್ಲಿ ಜವಾಬ್ದಾರಿ ಕೊಟ್ಟಿದ್ದಾರೆ ಅಲ್ಲೆಲ್ಲ ಗೆಲ್ಲಿಸಿಕೊಂಡು ಬಂದಿದ್ದಾರೆ
. ವಿಜಯೇಂದ್ರ ಎಲ್ಲೂ ದ್ವೇಷದ ರಾಜಕಾರಣ ಮಾಡಿರುವುದು ನಾನು ನೋಡಿಲ್ಲ. ಯಾರ ಮೇಲೂ ಎತ್ತಿ ಕಟ್ಟುವ ದ್ವೇಷದ ರಾಜಕಾರಣ ಮಾಡಿರುವುದನ್ನು ನೋಡಿಲ್ಲ ಎಂದರು. ವಿಜಯೇಂದ್ರ ಅವರು ಎಲ್ಲಾ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದನ್ನು ನೋಡಿದ್ದೇನೆ.
ಹೈಕಮಾಂಡ್ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. ಎಲ್ಲರೂ ಅವರಿಗೆ ಗೌರವ ಕೊಡುವ ಕೆಲಸ ಮಾಡಬೇಕು. ಹೈಕಮಾಂಡ್ ನೇಮಕ ಮಾಡಿದ ಮೇಲೆ ವಿರೋಧ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದರು.”