ಕೋಲ್ಕತ್ತಾ: 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಕೋಲ್ಕತ್ತಾದಲ್ಲಿ ಬಿಜೆಪಿ ಸಂಕಲ್ಪ ಪತ್ರ ( ಪ್ರಣಾಳಿಕೆ)ಯನ್ನು ಬಿಡುಗಡೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ದೃಷ್ಟಿಗೆ ಅನುಗುಣವಾಗಿ ರಾಜ್ಯವನ್ನು “ಹತಾಶೆಯಿಂದ ಅಭಿವೃದ್ಧಿಗೆ” ಪರಿವರ್ತಿಸುವ ಗುರಿ ಹೊಂದಲಾಗಿದೆ. ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಆಡಳಿತಾರೂಢ ಟಿಎಂಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 
ರಾಜ್ಯದ ಜನರಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಬದಲಾವಣೆಯನ್ನು ಬಯಸುತ್ತಿದ್ದಾರೆ. ರೈತರು, ಯುವಕರು ಮತ್ತು ಮಹಿಳೆಯರು ಸೇರಿದಂತೆ ಸಮಾಜದ ವಿವಿಧ ವರ್ಗಗಳು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಬಿಜೆಪಿಯ ಪ್ರಣಾಳಿಕೆಯು ಸಮಗ್ರ ನೀಲನಕ್ಷೆಯಾಗಿದೆ ಎಂದು ಅವರು ಹೇಳಿದರು. ಇಂದು ಬಿಜೆಪಿ 2026 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಈ ಪ್ರಣಾಳಿಕೆ ಬಂಗಾಳದ ಎಲ್ಲಾ ವಲಯಗಳಲ್ಲಿರುವ ಹತಾಶೆಯನ್ನು ಹೋಗಲಾಡಿಸಲು ಮಾರ್ಗವನ್ನು ಒದಗಿಸುತ್ತದೆ. ಬೆಳೆ ನಷ್ಟದಿಂದ ಅನಿಶ್ಚಿತತೆಯನ್ನು ಎದುರಿಸುತ್ತಿರುವ ರೈತರಿಗೆ, ನಿರುದ್ಯೋಗಿ ಯುವಕರಿಗೆ ಮತ್ತು ಭಯದಿಂದ ಬದುಕುತ್ತಿರುವ ಮಹಿಳೆಯರಿಗೆ ಇದು ಹೊಸ ದಿಕ್ಕನ್ನು ನೀಡುತ್ತದೆ. ಇದು ಬಂಗಾಳದ ಸಂಸ್ಕೃತಿ ಮತ್ತು ಅದರ ಹೆಮ್ಮೆಯ ಬಗ್ಗೆ ಕಾಳಜಿವಹಿಸುವ ಪ್ರತಿಯೊಬ್ಬ ನಾಗರಿಕರಿಗೂ ಹೊಸ ಭರವಸೆ ಮತ್ತು ವಿಶ್ವಾಸವನ್ನು ನೀಡುತ್ತದೆ ಎಂದರು.
ಸೋನಾರ್ ಬಾಂಗ್ಲಾ” (ಗೋಲ್ಡನ್ ಬೆಂಗಾಲ್) ವಿಷಯದ ಪ್ರಣಾಳಿಕೆಯು ಆಡಳಿತ ಸುಧಾರಣೆಗಳು, ಆರ್ಥಿಕ ಬೆಳವಣಿಗೆ, ರಾಷ್ಟ್ರೀಯ ಭದ್ರತೆ ಮತ್ತು ಸಾಮಾಜಿಕ ಕಲ್ಯಾಣದ ಮೇಲೆ ಕೇಂದ್ರೀಕೃತವಾಗಿರುವ 15 ಪ್ರಮುಖ ಬದ್ಧತೆಗಳನ್ನು ವಿವರಿಸುತ್ತದೆ. ಅಕ್ರಮ ನುಸುಳುಕೋರರನ್ನು ದೇಶದಿಂದ ಓಡಿಸಲು ಗಡೀಪಾರು” ನೀತಿಯನ್ನು ಭರವಸೆ ನೀಡುತ್ತದೆ. ಟಿಎಂಸಿ ಅಧಿಕಾರಾವಧಿಯಲ್ಲಿನ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯಗಳನ್ನು ವಿವರಿಸುವ ಶ್ವೇತಪತ್ರವನ್ನು ಬಿಡುಗಡೆ ಮಾಡುವುದಾಗಿ ಬಿಜೆಪಿ ಹೇಳಿದೆ. 
ಉದ್ಯೋಗ: ಪಕ್ಷವು ಐದು ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗಗಳು ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ವಾಗ್ದಾನ ಮಾಡಿದೆ. ನಿರುದ್ಯೋಗಿ ಯುವಕ/ಯುವತಿಯರಿಗೆ 10,000 ರೂಪಾಯಿಗಳ ಆರ್ಥಿಕ ನೆರವು ನೀಡುವುದಾಗಿಯೂ ಪ್ರಸ್ತಾಪಿಸಿದೆ. ಸರ್ಕಾರಿ ನೌಕರರಿಗೆ ಬಾಕಿ ವೇತನವನ್ನು ಪಾವತಿಸಲಾಗುವುದು, 7ನೇ ವೇತನ ಆಯೋಗ ಅನುಷ್ಟಾನ ಮಾಡಲಾಗುವುದು. ಸಿಂಡಿಕೇಟ್ ಸಂಸ್ಕೃತಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಮಹಿಳೆಯರಿಗೆ ತಿಂಗಳಿಗೆ 3,000 ರೂ.ಆರ್ಥಿಕ ನೆರವು: ಮಹಿಳಾ ಸುರಕ್ಷತೆ ಮತ್ತು ಸಬಲೀಕರಣದ ಗುರಿ ಹೊಂದಿರುವ ಬಿಜೆಪಿಯು ಮಹಿಳಾ ಪೊಲೀಸ್ ಬೆಟಾಲಿಯನ್ಗಳ ರಚನೆ, “ದುರ್ಗಾ ಸುರಕ್ಷಾ ಸಹಾಯ” ಯೋಜನೆಯ ಅನುಷ್ಠಾನ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಸೇರಿದಂತೆ ಹಲವಾರು ಕ್ರಮಗಳನ್ನು ವಿವರಿಸಿದೆ. ಅಲ್ಲದೇ ಪಕ್ಷವು ಮಹಿಳಾ ಫಲಾನುಭವಿಗಳಿಗೆ ಮಾಸಿಕ 3,000 ರೂ. ಆರ್ಥಿಕ ನೆರವಿನ ಭರವಸೆ ನೀಡಿದೆ.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕಾ ವಲಯವನ್ನು ಉತ್ತೇಜಿಸುವ ಭರವಸೆಯನ್ನು ನೀಡುವುದರೊಂದಿಗೆ ಪ್ರಮುಖ ಬೆಳೆಗಳಾದ ಅಕ್ಕಿ, ಆಲೂಗಡ್ಡೆ ಮತ್ತು ಮಾವಿಗೆ ಬೆಂಬಲ ಬೆಲಯ ವಾಗ್ದಾನ ಮಾಡಿದೆ. ಕೈಗಾರಿಕಾ ಅಭಿವೃದ್ಧಿ ಯೋಜನೆಗಳಲ್ಲಿ ಚಹಾ ತೋಟಗಳನ್ನು ಪುನರುಜ್ಜೀವನಗೊಳಿಸುವುದು, ಡಾರ್ಜಿಲಿಂಗ್ ಚಹಾ ಬ್ರಾಂಡ್ ಅನ್ನು ಬಲಪಡಿಸುವುದು ಮತ್ತು ಸೆಣಬು ಉದ್ಯಮವನ್ನು ಆಧುನೀಕರಿಸುವುದು ಸೇರಿದೆ. 
ಆಯುಷ್ಮಾನ್ ಭಾರತ್ನಂತಹ ಕೇಂದ್ರೀಯ ಯೋಜನೆಗಳನ್ನು ಜಾರಿಗೆ ತರಲಾಗುವುದು, ಉತ್ತರ ಬಂಗಾಳದಲ್ಲಿ ಎಮ್ಸ್ ,ಐ ಐ ಟಿ,ಐ ಐ ಎಮ್ ನಂತಹ ಪ್ರಧಾನ ಸಂಸ್ಥೆಗಳನ್ನು ವಿಸ್ತರಿಸಲಾಗುವುದು ಮತ್ತು ಉಚಿತ ಎಚ್ ಪಿ ವಿ ಲಸಿಕೆ ಮತ್ತು ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್ನಂತಹ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುವುದು ಎಂದು ಹೇಳಿದೆ.
Leave a comment