ನವದೆಹಲಿ: ಯುನೈಟೆಡ್ ಕಿಂಗ್ಡಮ್(ಬ್ರಿಟನ್)ನ ಆಹ್ವಾನದ ಮೇರೆಗೆ ಭಾರತವು ಹಾರ್ಮುಜ್ ಜಲಸಂಧಿಯ ಕುರಿತು ಅಂತರರಾಷ್ಟ್ರೀಯ ಮಾತುಕತೆಯಲ್ಲಿ ಭಾಗವಹಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಗುರುವಾರ ತಿಳಿಸಿದ್ದಾರೆ.

ಹಾರ್ಮುಜ್ ಜಲಸಂಧಿ ಮೂಲಕ ಸುರಕ್ಷಿತ ಮತ್ತು ಯಾವುದೇ ಅಡೆತಡೆಯಿಲ್ಲದ ತೈಲ ಸಾಗಣೆಯನ್ನು ಖಚಿತಪಡಿಸಿಕೊಳ್ಳುವುದು ಈ ಚರ್ಚೆಯ ಗುರಿಯಾಗಿದ್ದು, ತೈಲ ಬಿಕ್ಕಟ್ಟಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಜೈಸ್ವಾಲ್ ಹೇಳಿದ್ದಾರೆ.

ಎಲ್ಪಿಜಿ, ಎಲ್ಎನ್ಜಿ ಮತ್ತು ಇತರ ಸರಕುಗಳನ್ನು ಸಾಗಿಸುವ ನಮ್ಮ ಹಡಗುಗಳಿಗೆ ಸುರಕ್ಷಿತ ಸಾಗಣೆಯನ್ನು ನಾವು ಹೇಗೆ ಉತ್ತಮವಾಗಿ ಖಚಿತಪಡಿಸಿಕೊಳ್ಳಬಹುದು ಎಂಬುದನ್ನು ಗಮನಿಸಲು ನಾವು ಇರಾನ್ ಮತ್ತು ಇತರ ಪ್ರಾದೇಶಿಕ ದೇಶಗಳೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಕಳೆದ ಹಲವಾರು ದಿನಗಳಿಂದ, ಆರು ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಯಶಸ್ವಿಯಾಗಿ ಸಂಚರಿಸಿವೆ ಮತ್ತು ಸುರಕ್ಷಿತ ಹಡಗು ಮಾರ್ಗಗಳನ್ನು ನಿರ್ವಹಿಸಲು ಭಾರತವು ಸಂಬಂಧಿತ ದೇಶಗಳೊಂದಿಗೆ ಸಮನ್ವಯ ಸಾಧಿಸುವುದನ್ನು ಮುಂದುವರೆಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

Leave a comment