“ವಿಜಯನಗರ: ಉತ್ತರ ಕರ್ನಾಟಕದ ಹಾಗೂ ಕೋಟಿ ಕೋಟಿ ಭಕ್ತರ ನಂಬಿಕೆಯ ಕೇಂದ್ರವಾಗಿರುವ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರದಲ್ಲಿ ಬುಧವಾರ ಐತಿಹಾಸಿಕ ಕಾರ್ಣಿಕೋತ್ಸವ ಅದ್ಧೂರಿಯಾಗಿ ನೆರವೇರಿದೆ. ಮೈಲಾರ ಲಿಂಗೇಶ್ವರನ ಸನ್ನಿಧಿಯಲ್ಲಿ ಗೊರವಯ್ಯ ರಾಮಪ್ಪ ಅವರು 18 ಅಡಿ ಎತ್ತರದ ಬಿಲ್ಲೇರಿ ನುಡಿದ ದೈವವಾಣಿ ಅಲ್ಲಿ ಸೇರಿದ್ದ ಲಕ್ಷಾಂತರ ಭಕ್ತರಲ್ಲಿ ರೋಮಾಂಚನ ಉಂಟುಮಾಡಿದೆ.
ಸಂಪಾಯಿತಲೇ ಪರಾಕ್ ಎಂದು ಗೊರವಯ್ಯ ಗಟ್ಟಿಯಾಗಿ ಭವಿಷ್ಯ ನುಡಿದಿದ್ದು, ಇದರ ಬೆನ್ನಲ್ಲೇ ಭಕ್ತರು ಜಯಘೋಷ ಹಾಕಿದ್ದಾರೆ. ಸಂಪಾಯಿತಲೇ ಪರಾಕ್ ಎಂದರೇನು..? ಸಾಮಾನ್ಯವಾಗಿ ‘ಸಂಪಾಯಿತಲೇ ಪರಾಕ್’ ಎಂದರೆ ಎಲ್ಲವೂ ಸಂಪೂರ್ಣವಾಯಿತು ಅಥವಾ ಸಮೃದ್ಧವಾಯಿತು ಎಂದು ಅರ್ಥೈಸಲಾಗುತ್ತದೆ
ನಾಡಿನಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಿ, ರೈತರ ಬದುಕು ಹಸನಾಗುತ್ತೆ, ಸುಖ ಶಾಂತಿ ನೆಲೆಸುತ್ತೆ ಎನ್ನುವ ಅರ್ಥವನ್ನು ಈ ಪದ ನೀಡುತ್ತದೆ. ಗೊರವಯ್ಯನ ಭವಿಷ್ಯವಾಣಿಯಿಂದ ಭಕ್ತರು ಸಂತಸಗೊಂಡಿದ್ದು, ಕಷ್ಟಗಳೆಲ್ಲ ಕಳೆದು ಒಳ್ಳೆ ದಿನಗಳು ಬರುತ್ತೆ ಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಏತನ್ಮಧ್ಯೆ ಪ್ರತಿ ವರ್ಷ ಕಾರ್ಣಿಕ ಆದ ತಕ್ಷಣ, ಅಲ್ಲಿನ ಧರ್ಮದರ್ಶಿಗಳಾದ ವೆಂಕಪ್ಪಯ್ಯ ಒಡೆಯರ್ ಅವರು ಆ ಸಾಲಿನ ಅರ್ಥವನ್ನ ಬಿಡಿಸಿ ಹೇಳುತ್ತಿದ್ದರು.
ರಾಜಕೀಯದಲ್ಲಿ ಏನಾಗುತ್ತೆ, ಮಳೆ ಹೇಗಾಗುತ್ತೆ ಎಂದು ವಿಶ್ಲೇಷಣೆ ಮಾಡುತ್ತಿದ್ದರು, ಆದರೆ, ಆದ್ರೆ ಈ ಬಾರಿ ವಿಜಯನಗರ ಡಿಸಿ ಕವಿತಾ ಮನ್ನಿಕೇರಿ ಅವರು ಇದಕ್ಕೆ ತಡೆ ಹಾಕಿದ್ದಾರೆ. ಕಾರ್ಣಿಕವನ್ನ ಧರ್ಮದರ್ಶಿಗಳು ಅಥವಾ ಯಾರೂ ಅಧಿಕೃತವಾಗಿ ವಿಶ್ಲೇಷಣೆ ಮಾಡುವ ಹಾಗಿಲ್ಲ, ಅದು ಅವರವರ ಭಕ್ತಿಗೆ ಬಿಟ್ಟಿದ್ದು ಎಂದು ಖಡಕ್ ಸೂಚನೆ ನೀಡಿದ್ದಾರೆ.
Leave a comment