ಬೆಂಗಳೂರು : ಬೆಂಗಳೂರು 2 ನೇ ವಿಮಾನ ನಿಲ್ದಾಣ ಬಗ್ಗೆ ಎಎಐ ತಂಡದಿಂದ ಮೂರು ಕಡೆ ಸ್ಥಳ ಪರಿಶೀಲನೆ. ರಾಜ್ಯ ಸರಕಾರಕ್ಕೆ ಕಾರ್ಯಸಾಧ್ಯತಾ ವರದಿ ಸಲ್ಲಿಕೆ ಒಪ್ಪಂದದ ಪ್ರಕಾರ ಬಿಐಎಎಲ್ನ ಒಪ್ಪಿಗೆ ಬೇಕು; 2033 ವರೆಗೂ 2 ನೇ ವಿಮಾನ ನಿಲ್ದಾಣ ಆರಂಭಿಸುವಂತಿಲ್ಲ.
ಬೆಂಗಳೂರು ಆಸುಪಾಸಿನಲ್ಲಿಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಮೂರು ಕಡೆ ಸ್ಥಳ ಪರಿಶೀಲನೆ ನಡೆಸಿ ಕೊಟ್ಟಿರುವ ಕಾರ್ಯಸಾಧ್ಯತಾ ವರದಿಯನ್ನು ಕರ್ನಾಟಕ ಸರಕಾರಕ್ಕೆ ಸಲ್ಲಿಸಿದೆ.
ಆದರೆ, ಕೆಐಎಎಲ್ 25 ವರ್ಷಗಳ ಸೇವೆ (2033) ಪೂರ್ಣಗೊಳಿಸುವವರೆಗೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯವಿಲ್ಲ. ಈ ಕುರಿತು ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್, ”ರಾಜ್ಯ ಸರಕಾರದಿಂದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯಾವುದೇ ಪ್ರಸ್ತಾವನೆ ಬಂದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾಧಿರೆ.
”ಕರ್ನಾಟಕ ಸರಕಾರದ ಕೋರಿಕೆಯಂತೆ ಎಎಐ ಉನ್ನತ ತಂಡವು ಬೆಂಗಳೂರು ಸುತ್ತಮುತ್ತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಸಂಬಂಧ ಸ್ಥಳ ಪರಿಶೀಲನೆ ನಡೆಸಿ, ಪ್ರಾಥಮಿಕ ವರದಿ ಕೊಟ್ಟಿದೆ. ಬಳಿಕ ಕರ್ನಾಟಕ ಸರಕಾರದಿಂದ ಅಥವಾ ಯಾವುದೇ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದಿಂದ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣಗಳ (ಜಿಎಫ್ಎ) ನೀತಿಯಡಿ ಕೇಂದ್ರಕ್ಕೆ ಯಾವುದೇ ಪ್ರಸ್ತಾವನೆ ಬಂದಿಲ್ಲ,” ಎಂದು ಹೇಳಿದ್ದಾರೆ.

ಬೆಂಗಳೂರು 2ನೇ ವಿಮಾನ ನಿಲ್ದಾಣ; ಸರ್ಕಾರಕ್ಕೆ ವರದಿ ಸಲ್ಲಿಸಿದ ಎಎಐ! ಯಾವ ಜಾಗ ಫೈನಲ್? ವರದಿಯಲ್ಲೇನಿದೆ? 3 ದೊಡ್ಡ ಸವಾಲುಗಳು ಏನು? ”ಕೇಂದ್ರ ಸರಕಾರ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ನಡುವಿನ ರಿಯಾಯಿತಿ ಒಪ್ಪಂದದ (ಸಿಎ) ಪ್ರಕಾರ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎಎಲ್) 150 ಕಿಲೋ ಮೀಟರ್ ವ್ಯಾಪ್ತಿಯಲ್ಲಿ25 ವರ್ಷಗಳ ಸೇವೆಗೂ ಮುಂಚಿತವಾಗಿ ಯಾವುದೇ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಸಾಧ್ಯವಿಲ್ಲ.
ಜತೆಗೆ, ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳ (ಮೈಸೂರು ಮತ್ತು ಹಾಸನವನ್ನು ದೇಶೀಯ ವಿಮಾನ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸುವುದನ್ನು ಹೊರತುಪಡಿಸಿ) ಅಭಿವೃದ್ಧಿ, ಸುಧಾರಣೆ ಅಥವಾ ಮೇಲ್ದರ್ಜೆಗೆ ಏರಿಸುವುದಕ್ಕೂ ಅನುಮತಿ ಕೊಡುವುದಿಲ್ಲ,” ಎಂದು ವಿವರಿಸಿದ್ದಾರೆ.
”ಕೆಐಎಎಲ್ನಿಂದ 150 ಕಿ.ಮೀ. ವ್ಯಾಪ್ತಿಯೊಳಗೆ ಯಾವುದೇ ಹೊಸ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಅಥವಾ ಅಸ್ತಿತ್ವದಲ್ಲಿರುವ ಎಚ್ಎಎಲ್ ವಿಮಾನ ನಿಲ್ದಾಣದ ಪುನರಾರಂಭಕ್ಕೆ ಸಿಎ ನಿಬಂಧನೆಗಳ ಪ್ರಕಾರ ಬಿಐಎಎಲ್ನಿಂದ ಒಪ್ಪಿಗೆ ಪಡೆಯಬೇಕು. ಕೆಐಎಎಲ್ ಉದ್ಘಾಟನೆಯಾದ ದಿನದಿಂದ 25 ವರ್ಷಗಳ ಸೇವೆ ಪೂರ್ಣಗೊಳಿಸುವವರೆಗೂ ರಿಯಾಯಿತಿ ಒಪ್ಪಂದದ ಷರತ್ತುಗಳು ಅನ್ವಯವಾಗಲಿವೆ,” ಎಂದು ಮಾಹಿತಿ ನೀಡಿದ್ದಾರೆ.

ಟೆಂಡರ್ ಕರೆದ ಕೆಎಸ್ಐಐಡಿಸಿ ರಾಜ್ಯ ಸರಕಾರ ಎರಡನೇ ವಿಮಾನ ನಿಲ್ದಾಣಕ್ಕೆ ಕನಕಪುರ ರಸ್ತೆಯ ಚೂಡಹಳ್ಳಿ, ಸೋಮನಹಳ್ಳಿ ಮತ್ತು ನೆಲಮಂಗಲದ ಬಳಿ ಈಗಾಗಲೇ ಸ್ಥಳಗಳನ್ನು ಗುರುತಿಸಿದೆ. ಎಎಐ, ಈ ಮೂರೂ ಕಡೆ ಸ್ಥಳ ಪರಿಶೀಲನೆ ನಡೆಸಿ, ವರದಿ ಕೊಟ್ಟಿದೆ.
ಈ ಮಧ್ಯೆ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು (ಕೆಎಸ್ಐಐಡಿಸಿ) ನೂತನ ವಿಮಾನ ನಿಲ್ದಾಣಕ್ಕೆ ಸ್ಥಳದ ಅನುಕೂಲ, ತಾಂತ್ರಿಕ ಹಾಗೂ ಆರ್ಥಿಕ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಪರಿಣತ ಸಲಹಾ ಸಂಸ್ಥೆಯ ಆಯ್ಕೆಗಾಗಿ ಟೆಂಡರ್ ಕರೆದಿದೆ. ಟೆಂಡರ್ಗೆ ಅರ್ಜಿ ಸಲ್ಲಿಸಲು 2026ರ ಜ.12 ಕೊನೆಯ ದಿನವಾಗಿದೆ.
ಆರ್ಥಿಕ ಕಾರ್ಯಸಾಧ್ಯತೆ ಬಗ್ಗೆಯೂ ಸಂಸ್ಥೆ ಅಧ್ಯಯನ ಟೆಂಡರ್ನಲ್ಲಿ ಆಯ್ಕೆಯಾಗುವ ಸಲಹಾ ಸಂಸ್ಥೆಯು 5 ತಿಂಗಳಲ್ಲಿ ಸಮಗ್ರ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು.
ಉದ್ದೇಶಿತ 2ನೇ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ತಗಲುವ ವೆಚ್ಚ, ಅಗತ್ಯ ಇರುವ ಭೂಮಿ, ರಕ್ಷಣಾ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸೇರಿದಂತೆ ಹಲವು ಕಡೆಗಳಿಂದ ಪಡೆಯಬೇಕಾದ ಅನುಮೋದನೆಗಳ ವಿವರಗಳನ್ನೂ ಕಾರ್ಯಸಾಧ್ಯತಾ ವರದಿಯಲ್ಲಿನೀಡಬೇಕಾಗುತ್ತದೆ.
ವಿಮಾನ ನಿಲ್ದಾಣಕ್ಕೆ ಇರುವ ವಿವಿಧ ರೀತಿಯ ಸಂಪರ್ಕ, ನಿರ್ಮಾಣ ನಂತರದ ಮೂಲಸೌಕರ್ಯ ಅಭಿವೃದ್ಧಿ, ಸರಕು ಸಾಗಣೆ ಮತ್ತು ಪ್ರಯಾಣಿಕ ಸೇವೆಗಳು ಹಾಗೂ ಅದರಿಂದಾಗುವ ಆರ್ಥಿಕ ಕಾರ್ಯಸಾಧ್ಯತೆ ಬಗ್ಗೆಯೂ ಸಂಸ್ಥೆ ಅಧ್ಯಯನ ನಡೆಸಲಿದೆ.”

Leave a comment