ಬೆಂಗಳೂರು (ನ.24): ತಾನು ಪ್ರಧಾನಮಂತ್ರಿ ಕಚೇರಿ (PMO)ಯಲ್ಲಿ ಕೆಲಸ ಮಾಡುವ ಉನ್ನತ ಅಧಿಕಾರಿ ಎಂದು ಹೇಳಿಕೊಂಡು, ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದತ್ತು ಪುತ್ರ ಎಂದು ಬಿಂಬಿಸಿಕೊಂಡು ವೈದ್ಯರೊಬ್ಬರಿಗೆ ಬರೋಬ್ಬರಿ 2.7 ಕೋಟಿ ರೂಪಾಯಿಗಳಷ್ಟು ಪಂಗನಾಮ ಹಾಕಿದ ವಂಚಕನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ವಿಜಯನಗರದ ನಿವಾಸಿ ಸುಜಯ್ ಅಲಿಯಾಸ್ ಸುಜಯೇಂದ್ರ ಎಂದು ಗುರುತಿಸಲಾಗಿದೆ. ಈತ ಜಮ್ಮು ಕಾಶ್ಮೀರ ಮೂಲದ ವೈದ್ಯರೊಬ್ಬರನ್ನು ಸಂಪರ್ಕಿಸಿ ತಾನು ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಯಾಗಿರುವುದಾಗಿ ನಂಬಿಸಿದ್ದಾನೆ. ಮಾತ್ರವಲ್ಲದೆ, ಉಡುಪಿ ಪುತ್ತಿಗೆ ಮಠದ ಸ್ವಾಮೀಜಿ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಸ್ಟೇಜ್ ಹಂಚಿಕೊಂಡಿರುವುದಾಗಿ ಫೋಟೋಗಳನ್ನು ತೋರಿಸಿ ವಿಶ್ವಾಸ ಗಳಿಸಿ ವಂಚಿಸಿದ್ದಾನೆ.
ದೇವನಹಳ್ಳಿ ಬಳಿ ವಿಲ್ಲಾ ಆಸ್ಪತ್ರೆ ಆಮಿಷ: ದೇವನಹಳ್ಳಿ ಬಳಿ ಅತ್ಯಾಧುನಿಕ ವಿಲ್ಲಾ ಮಾದರಿಯಲ್ಲಿ ಆಯುರ್ವೇದ ಆಸ್ಪತ್ರೆಯನ್ನು ತೆರೆಯಲು ಸರ್ಕಾರದಿಂದ ಅವಕಾಶ ಮಾಡಿಕೊಡುತ್ತೇನೆ ಎಂದು ಆಮಿಷ ಒಡ್ಡಿದ್ದ ಸುಜಯೇಂದ್ರ, ಈ ನೆಪದಲ್ಲಿ ವೈದ್ಯರಿಂದ ಹಂತ ಹಂತವಾಗಿ 2.7 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಿದ್ದಾನೆ.
ಕಳ್ಳಾಟ ಬಯಲಾಗಿದ್ದು ಹೇಗೆ?
ವಂಚನೆಗೊಳಗಾದ ವೈದ್ಯರು ದೂರು ನೀಡಿದ ಬಳಿಕ ತನಿಖೆ ಕೈಗೊಂಡ ವಿಜಯನಗರ ಪೊಲೀಸರು ಸುಜಯೇಂದ್ರ ಕಳ್ಳಾಟ ನಡೆಸಿರುವುದು ಗೊತ್ತಾಗಿದೆ. ಸುಜಯೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತನ ವಂಚನೆಯ ಅಸಲಿಯತ್ತು ಬಯಲಾಗಿದೆ.

ಎರಡು ಬಾರಿ ಜೈಲು ವಂಚಕ: ಆರೋಪಿ ಸುಜಯೇಂದ್ರ ಎಂಥ ಖರ್ನಾಕ್ ಎಂದರೆ ಈಗಾಗಲೇ ಎರಡು ಬಾರಿ ಜೈಲು ಪಾಲಾಗಿದ್ದ ಹಳೇ ಅಪರಾಧಿಯಾಗಿದ್ದಾನೆ. ಅವನ ವಿರುದ್ಧ ಈಗಾಗಲೇ 4 ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿವೆ ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ. ಇಷ್ಟೇಲ್ಲವಂಚನೆಪ್ರಕರಣಗಳಿದ್ದರೂಉಪಮುಖ್ಯಮಂತ್ರಿಯವರೊಂದಿಗೆ ಸ್ಟೇಜ್ ಹಂಚಿಕೊಂಡಿರುವದು ಅಚ್ಚರಿ. ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
Leave a comment