ಮುಂಡಾಜೆ (ದ.ಕ.): ಕಳೆದ ವರ್ಷ ಪಾವತಿಸಿದ ಬೆಳೆ ವಿಮೆ ಕಂತಿನ ಮೊತ್ತ ಕೃಷಿಕರ ಖಾತೆಗೆ ಇನ್ನೂ ಜಮೆಯಾಗಿಲ್ಲ. ಕಳೆದ ವರ್ಷ ನ.4ರಿಂದ ದ.ಕ. ಜಿಲ್ಲೆಯಲ್ಲಿ ವಿಮೆ ಮೊತ್ತ ಕೃಷಿಕರ ರಾಷ್ಟ್ರೀಕೃತ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿತ್ತು. ಈ ಬಾರಿಯ ಮೊತ್ತ ಬೇಗನೆ ಜಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಕೃಷಿಕರಿಗೆ ನಿರಾಸೆಯಾಗಿದೆ.
ಕಳೆದ ಮಳೆಗಾಲದಲ್ಲಿ ಭಾರಿ ಮಳೆಯಿಂದ ಅಡಕೆ ಕೃಷಿಕರಿಗೆ ಫಸಲು ನಷ್ಟವಾಗಿದ್ದು, ಬೆಳೆ ವಿಮೆ ಮೊತ್ತ ಬೇಗನೆ ಜಮೆಗೊಂಡರೆ ಹೆಚ್ಚಿನ ಅನುಕೂಲವಾಗುತ್ತದೆ. ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ಮೊದಲ ವಾರದಲ್ಲಿ ಬೆಳೆ ವಿಮೆ ಮೊತ್ತ ಕೃಷಿಕರ ಖಾತೆಗೆ ಜಮೆಯಾಗುತ್ತದೆ.
ದ.ಕ. ಜಿಲ್ಲೆಯಲ್ಲಿ ಅಡಕೆ ಮತ್ತು ಕಾಳುಮೆಣಸಿಗೆ ಅನ್ವಯವಾಗುವ ಬೆಳೆ ವಿಮೆ ಯೋಜನೆಗೆ ಕೃಷಿಕರು ಅಡಕೆ ಹೆಕ್ಟೇರ್ಗೆ 6,400 ರೂ. ಹಾಗೂ ಕಾಳುಮೆಣಸಿನ ಪ್ರತಿ ಹೆಕ್ಟೇರ್ಗೆ 2,350 ರೂ. ವಿಮಾ ಪ್ರೀಮಿಯಂ ಸಹಕಾರಿ ಸಂಘ ಅಥವಾ ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಸರಕಾರ ನಿಗದಿಗೊಳಿಸಿದ ದಿನದೊಳಗೆ ಪಾವತಿಸಿದರೆ, ಅಡಕೆ ಹೆಕ್ಟೇರ್ಗೆ ಗರಿಷ್ಠ 1,28,000 ರೂ. ಹಾಗೂ ಕಾಳುಮೆಣಸಿಗೆ ಪ್ರತಿ ಹೆಕ್ಟೇರ್ಗೆ 47,000 ರೂ. ತನಕ ವಿಮೆ ಮೊತ್ತ ಆಯಾ ವರ್ಷದಲ್ಲಿಬಿದ್ದ ಮಳೆಯ ಆಧಾರದಲ್ಲಿ ಜಮೆಯಾಗುತ್ತದೆ.

2018-19ರಲ್ಲಿ ಗರಿಷ್ಠ ಮಿತಿ 1.28 ಲಕ್ಷ ರೂ., 2019-20ರಲ್ಲಿ 60 ಸಾವಿರ ರೂ., 2020-21ರಲ್ಲಿ 52 ಸಾವಿರ ರೂ., 2021-22ರಲ್ಲಿ 60 ಸಾವಿರ ರೂ. 2023-24ರಲ್ಲಿ 70 ಸಾವಿರ ರೂ. ಆಸುಪಾಸು ಮೊತ್ತ ಪ್ರತಿ ಹೆಕ್ಟೇರ್ ಅಡಕೆ ಬೆಳೆಗೆ ಜಮೆಗೊಂಡಿತ್ತು. ಸಹಕಾರ ಸಂಘ, ತೋಟಗಾರಿಕೆ ಇಲಾಖೆಗಳಲ್ಲಿ ಪ್ರಶ್ನಿಸುತ್ತಿರುವ ಕೃಷಿಕರು: ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಮೂಲಕ ಕೃಷಿಕರು ವಿಮೆ ಕಂತನ್ನು ಪಾವತಿಸಬಹುದು.
ರಾಷ್ಟ್ರೀಕೃತ ಬ್ಯಾಂಕ್ಗಳು ಈ ಯೋಜನೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಇದರಿಂದ ಕೃಷಿಕರು ಸಹಕಾರ ಸಂಘಗಳ ಮೂಲಕವೇ ಕಂತನ್ನು ಪಾವತಿಸುತ್ತಾರೆ. ಸಹಕಾರ ಸಂಘಗಳು ತನ್ನ ಸದಸ್ಯರ ಅನುಕೂಲಕ್ಕಾಗಿ ಈ ಯೋಜನೆಯನ್ನು ಕೃಷಿಕರಿಗೆ ತಲುಪಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತವೆ. ಇದಕ್ಕಾಗಿ ಸಹಕಾರಿ ಸಂಘಗಳ ಸಿಬ್ಬಂದಿ ಕಂತಿನ ಮೊತ್ತ, ಅಗತ್ಯ ದಾಖಲೆಗಳನ್ನು ಸಂಗ್ರಹಿಸುವ ಹೆಚ್ಚುವರಿ ಕೆಲಸ ಮಾಡುತ್ತಾರೆ.

ಪ್ರದೇಶದಲ್ಲಿ ಬಿದ್ದ ಮಳೆಯ ಪ್ರಮಾಣದ ಆಧಾರದಲ್ಲಿ ನೀಡುವ ಬೆಳೆ ವಿಮೆಗೆ ಬೇಕಾಗುವ ಇತರ ದಾಖಲೆಗಳನ್ನು ತೋಟಗಾರಿಕೆ ಇಲಾಖೆ ಒದಗಿಸುತ್ತದೆ. ಆದರೆ ಬೆಳೆ ವಿಮೆ ಮೊತ್ತ ಜಮೆಯಾಗುವ ಯಾವುದೇ ಮಾಹಿತಿ ಎರಡು ಇಲಾಖೆಗಳಿಗೂ ಸಿಗುವುದಿಲ್ಲ. ಮೊತ್ತ ನೇರವಾಗಿ ರಾಷ್ಟ್ರೀಕೃತ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಇದೀಗ ಬೆಳೆ ವಿಮೆ ಮೊತ್ತ ಕಟ್ಟಿರುವ ಕೃಷಿಕರು ಸಹಕಾರಿ ಸಂಘ ಹಾಗೂ ತೋಟಗಾರಿಕೆ ಇಲಾಖೆಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಆದರೆ ಅವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ.
ಇದರಿಂದ ಯಾರನ್ನು ಪ್ರಶ್ನಿಸಬೇಕು ಎಂಬ ಗೊಂದಲ ಕೃಷಿಕರನ್ನು ಕಾಡುತ್ತಿದೆ. ಬೆಳೆ ವಿಮೆ ಮೊತ್ತ ಕೃಷಿಕರ ಖಾತೆಗೆ ಇನ್ನೂ ಜಮೆ ಆಗದಿರುವ ಕುರಿತು ಕಾರಣ ಕೇಳಿ ಸರಕಾರಕ್ಕೆ ತಕ್ಷಣ ಪತ್ರ ಬರೆಯಲಾಗುವುದು. ಕೂಡಲೇ ಈ ಮೊತ್ತ ಜಮೆ ಮಾಡುವಂತೆ ಮನವಿ ಮಾಡಲಾಗುವುದು ಎಂದಿದ್ದಾರೆ ಪ್ರತಾಪಸಿಂಹ ನಾಯಕ್, ಎಂಎಲ್ಸಿ. ಬೆಳೆ ವಿಮೆ ಮೊತ್ತ ನವೆಂಬರ್ ಮೊದಲ ವಾರದೊಳಗೆ ಜಮೆಯಾಗಬಹುದು ಎಂಬ ನಿರೀಕ್ಷೆ ಇತ್ತು.
ಆದರೆ ಇನ್ನೂ ಜಮೆಯಾಗಿಲ್ಲ. ಹೆಚ್ಚಿನ ಕೃಷಿ ಕೆಲಸಗಳು ಇರುವುದರಿಂದ ಮೊತ್ತ ಬೇಗನೆ ಜಮೆಯಾದರೆ ಅನುಕೂಲವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನಹರಿಸುವ ಅಗತ್ಯವಿದೆ ಎಂದಿದ್ದಾರೆ ಸಂತೋಷ್ ಕೇಳ್ಕರ್, ಕೃಷಿಕ, ಕರಂಬಾರು ಗ್ರಾಮ”

Leave a comment