ಯುರೋಪಿಯನ್ ಯೂನಿಯನ್ನಿಂದ ಭಾರತದ ಕಾಫಿಯ ಮೇಲೆ ಡಿಫಾರೆಸ್ಪ್ರೇಶನ್ ನಿಯಮ ಜಾರಿ ಕಾಫಿ ಬೆಳೆದ ಪ್ರದೇಶಗಳ ಜಿಯೋಲೊಕೇಷನ್ ಹಾಗೂ ಪೋಲಿಗಾನ್ ಗಡಿ ಗುರುತಿಸಲು ಬೆಳೆಗಾರರ ಮೇಲೆ ಒತ್ತಡ 2020 ಡಿಸೆಂಬರ್ 31ರ ನಂತರ ಜಾರಿಯಲ್ಲಿರುವ ಇಯುಡಿಆರ್ ನಿಯಮದ ಅನುಸಾರ, ಅರಣ್ಯ ನಾಶ ತಡೆಗೆ ಈ ಕ್ರಮ ಚಿಕ್ಕಮಗಳೂರು ಜಿಲ್ಲೆಯ 3000 ಕಾಫಿ ತೋಟಗಳನ್ನು ಇತ್ತೀಚೆಗೆ ಜಿಯೋಲೊಕೇಷನ್ ಮಾಡಿರುವ ಬೆಳೆಗಾರರು ದೇಶದಲ್ಲೇ ಶೇ. 70ರಷ್ಟು ಕಾಫಿ ಬೆಳೆಯುವ ಕರ್ನಾಟಕದ ಬೆಳೆಗಾರರಿಗೆ ಈ ಹೊಸ ನಿಯಮ ಸವಾಲಾಗಿದೆ
ದೇಶದಲ್ಲಿ ಉತ್ಪಾದನೆಯಾಗುವ ಕಾಫಿಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪ್ರಮಾಣವನ್ನು ಆಮದು ಮಾಡಿಕೊಳ್ಳುವ ಯುರೋಪಿಯನ್ ಯೂನಿಯನ್ ಭಾರತದ ಕಾಫಿಗೆ ಡಿಫಾರೆಸ್ಪ್ರೇಷನ್ ನಿಯಮ ಜಾರಿಗೊಳಿಸಿದೆ. ಕಾಫಿ ಬೆಳೆಗಾರರು ಹವಾಮಾನ ವೈಪರೀತ್ಯ, ಕಾಡು ಪ್ರಾಣಿಗಳ ಹಾವಳಿ, ರೋಗಬಾಧೆ, ಕೂಲಿ ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ಯುರೋಪಿಯನ್ ಯೂನಿಯನ್ ಹೊಸ ನಿಯಮ ಜಾರಿಗೊಳಿಸಿದ್ದು ಅದರಂತೆ ಬೆಳೆಗಾರರು ತಮ್ಮ ತೋಟಗಳನ್ನು ಜಿಯೋಲೊಕೇಷನ್ ಹಾಗೂ ಪೋಲಿಗಾನ್ ಗಡಿ ಗುರುತು ಮಾಡಬೇಕಿದೆ.

ಬೆಳೆಗಾರರಿಗೆ ಡಿಫಾರೆಸ್ಪ್ರೇಷನ್ ಸವಾಲು ದಿನೇದಿನೆ ಕಾಫಿಗೆ ಬಂಗಾರದ ಬೆಲೆ ಬರುತ್ತಿದ್ದು ಭಾರತ ತನ್ನ ಉತ್ಪಾದನೆಯ ಶೇ. 70ಕ್ಕಿಂತ ಹೆಚ್ಚು ಕಾಫಿಯನ್ನು ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ. ಇದರಲ್ಲಿ ಯುರೋಪಿನ ರಾಷ್ಟ್ರಗಳ ಪಾಲು ಶೇ. 60. ಈಗ ಯುರೋಪಿಯನ್ ಒಕ್ಕೂಟ ಭಾರತದ ಕಾಫಿಯ ಮೇಲೂ ಡಿಫಾರೆಸ್ಪ್ರೇಷನ್ ನಿಯಮ ಜಾರಿಗೊಳಿಸಿದ್ದು ಇದರ ಪರಿಣಾಮ ನೇರವಾಗಿ ಭಾರತದ ಕಾಫಿ ಬೆಳೆಗಾರರು ಹಾಗೂ ರಫ್ತುದಾರರ ಮೇಲೆ ಬೀರಲಿದೆ.
ಕಾಫಿ ಬೆಳೆಗಾರರು ಈ ಬಾರಿಯ ಫಸಲು ಮಾರಾಟಕ್ಕೂ ಮೊದಲು ಜಿಯೋಲೊಕೇಷನ್ ಮಾಹಿತಿ ಹಾಗೂ ಪೋಲಿಗಾನ್ ಗಡಿಗಳನ್ನು ಜಿಯೋ ಜೆಸಾನ್ ಫಾರ್ಮೆಟ್ನಲ್ಲಿ ಒದಗಿಸಿದಾಗ ಮಾತ್ರ ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡಲು ಅವಕಾಶ ಸಿಗಲಿದೆ. ಸಣ್ಣ ಬೆಳೆಗಾರರಿಗೂ ನಿಯಮ ಅನ್ವಯ 4 ಹೆಕ್ಟೆರ್ ಒಳಗಿನ ತೋಟಗಳಿಗೆ ಜಿಯೋಲೊಕೇಷನ್ ಸಾಕು. 4 ಹೆಕ್ಟೆರ್ಗಿಂತ ದೊಡ್ಡದಾಗಿರುವ ತೋಟಗಳಿಗೆ ಪೋಲಿಗಾನ್ ಗಡಿ ಮಾಹಿತಿ ಕಡ್ಡಾಯವಾಗಿದೆ.

ಜತೆಗೆ ಈ ನಿಯಮವು ನೇರವಾಗಿ ಯುರೋಪ್ ರಾಷ್ಟ್ರಗಳಿಗೆ ಕಾಫಿ ರಫ್ತು ಮಾಡುವ ರಫ್ತುದಾರರು, ಯುರೋಪ್ ಮಾರುಕಟ್ಟೆಗೆ ಪೂರೈಕೆ ಮಾಡುವ ವ್ಯಾಪಾರಿಗಳು, ಕಾಫಿ ಕ್ಯೂರ್ಗಳು ಹಾಗೂ ಕಾಫಿ ಮಾರುವ ಬೆಳೆಗಾರರಿಗೂ ಅನ್ವಯವಾಗಲಿದೆ. ಏನಿದು ಡಿ ಫಾರೆಸ್ಪ್ರೇಷನ್ ನಿಯಮ? 2020 ಡಿಸೆಂಬರ್ 31ರ ನಂತರ ಇಯುಡಿಆರ್ ನಿಯಮ ಜಾರಿಯಾಗಿದ್ದು ಅರಣ್ಯ ನಾಶಕ್ಕೆ ಸಂಬಂಧಪಟ್ಟ ಉತ್ಪನ್ನಗಳು ಯೂರೋಪಿಯನ್ ಯುನಿಯನ್ಗೆ ಪ್ರವೇಶಿಸದಂತೆ ತಡೆಯುವುದಾಗಿದೆ. ಪ್ರಸಕ್ತ ವರ್ಷದಿಂದ ಕಾಫಿಗೂ ಈ ನಿಯಮ ಜಾರಿಯಾಗಿದೆ.
ಇದರ ಪ್ರಕಾರ ಯುರೋಪ್ ರಾಷ್ಟ್ರಗಳಿಗೆ ಕಳುಹಿಸಲ್ಪಡುವ ಪ್ರತಿಯೊಂದು ಕಾಫಿ ಸಾಗಣೆಯ ಮೂಲವನ್ನು ಖಚಿತಪಡಿಸಬೇಕಾಗಿರುವುದರಿಂದ ಬೆಳೆಗಾರರು ತಮ್ಮ ಕಾಫಿ ಬೆಳೆಯುವ ಪ್ರದೇಶವನ್ನು ಈ ನಿಯಮದ ಅನುಸಾರ ಜಿಯೋಲೊಕೇಷನ್ ಮಾಡಿಕೊಳ್ಳಬೇಕಿದೆ. ಯುರೋಪ್ ರಾಷ್ಟ್ರಗಳಿಗೆ ಭಾರತದ ಕಾಫಿ ಹೆಚ್ಚು ರಫ್ತಾಗುತ್ತಿದೆ. ಯುರೋಪಿಯನ್ ಯೂನಿಯನ್ ಡಿಫಾರೆಸ್ಪ್ರೇಷನ್ ರೆಗ್ಯೂಲೇಷನ್ ನಿಯಮದ ಪ್ರಕಾರ ಜಿಯೋಲೊಕೇಷನ್ ಮಾಡದಿದ್ದರೆ ಕಾಫಿ ಖರೀದಿ ಮಾಡುವುದಿಲ್ಲ. ಆದ್ದರಿಂದ ಬೆಳೆಗಾರರಿಗೆ ಕಾಫಿ ಬೋರ್ಡ್ ಕಡೆಯಿಂದ ಮಾಹಿತಿ ನೀಡಲಾಗುತ್ತಿದೆ.
ಜತೆಗೆ ಕಾಫಿ ಬೋರ್ಡ್ಗೆ ಮನವಿ ಸಲ್ಲಿಸಿದರೆ ನಾವೇ ಜಿಯೋಲೋಕೇಷನ್ ಮಾಡಿಕೊಡುತ್ತೇವೆ. ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ 3 ಸಾವಿರ ತೋಟಗಳನ್ನು ಜಿಯೋ ಲೊಕೇಷನ್ ಮಾಡಲಾಗಿದೆ. ಬೆಳೆಗಾರರಿಗೆ ಇನ್ನಷ್ಟು ಜಾಗೃತಿ ಮೂಡಿಸಿ ಎಲ್ಲ ತೋಟಗಳನ್ನು ಈ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದು ಚಿಕ್ಕಮಗಳೂರು ಕಾಫಿಬೋರ್ಡ್ ಉಪ ನಿರ್ದೇಶಕರ ವೆಂಕಟರೆಡ್ಡಿ ತಿಳಿಸಿದ್ದಾರೆ.”

Leave a comment