ಕರಾವಳಿಯಲ್ಲಿ ತಲೆ ಎತ್ತಲಿದೆ  ಟೆಕ್ ಪಾರ್ಕ್ : ಮಂಗಳೂರಿನಲ್ಲಿ 11,000 ಮಂದಿಗೆ ಉದ್ಯೋಗ

28

ಬೆಂಗಳೂರು: ರಾಜ್ಯದ ಟೆಕ್ ಬೆಳವಣಿಗೆಯನ್ನು ರಾಜಧಾನಿಯಾಚೆಗೂ ವಿಸ್ತರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಬಿಯಾಂಡ್ ಬೆಂಗಳೂರು ಉಪಕ್ರಮದ ಅಡಿಯಲ್ಲಿ ಮಂಗಳೂರಿನಲ್ಲಿ ಟೆಕ್‌ ಪಾರ್ಕ್‌ ಅನ್ನು ನಿರ್ಮಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಬಿಡ್‌ಗಳನ್ನು ಆಹ್ವಾನಿಸಿದೆ.

ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ಅಂದ್ರೇ ಕಿಯೋನಿಕ್ಸ್‌ ಈ ಯೋಜನೆಯ ಟೆಂಡರ್‌ ಅನ್ನು ಆಹ್ವಾನಿಸಿದ್ದು, ಡಿಸೆಂಬರ್‌ನೊಳಗೆ ಟೆಂಡರ್ ಪ್ರಕ್ರಿಯೆ ಫೈನಲ್‌ ಆಗುವ ನಿರೀಕ್ಷೆಯಿದೆ. ಈ ಯೋಜನೆಯನ್ನು ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ.

ಇದರಿಂದ ಸುಮಾರು 11 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಮಂಗಳೂರು ಕರ್ನಾಟಕದ ಮತ್ತೊಂದು ಟೆಕ್‌ ಸಿಟಿಯಾಗಲಿದೆ. ಇದರ ಜೊತೆ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಹೂಡಿಕೆ ಮಾಡಲು 11 ಕಂಪನಿಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಉದ್ದೇಶಿತ ಟೆಕ್ ಪಾರ್ಕ್‌ಗಾಗಿ ಮಂಗಳೂರಿನ ಡೇರೆಬೈಲ್‌ನಲ್ಲಿರುವ ಬ್ಲೂಬೆರ್ರಿ ಹಿಲ್ಸ್ ರಸ್ತೆಯ ಬಳಿ 3.285 ಎಕರೆ ಜಾಗವನ್ನು ಗುರುತಿಸಲಾಗಿದೆ. ಈ ಸ್ಥಳವು ರಾಷ್ಟ್ರೀಯ ಹೆದ್ದಾರಿ 66 ರಿಂದ ಕೇವಲ ಒಂದು ಕಿಲೋಮೀಟರ್‌ಗಿಂತಲೂ ಕಮ್ಮಿ ದೂರದಲ್ಲಿದೆ. ಇದು ಅತ್ಯಂತ ಆಯಕಟ್ಟಿನ ಸ್ಥಳವಾಗಿದ್ದು, ಈಗಾಗಲೇ ಇಲ್ಲಿ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಕ್ಯಾಂಪಸ್ ಕೂಡ ಇದೆ. ಇನ್ನೂ, ಇಲ್ಲಿ ನಿರ್ಮಾಣವಾಗಲಿರುವುದು ಸಾಮಾನ್ಯ ಟೆಕ್ ಪಾರ್ಕ್ ಅಲ್ಲ, ಬದಲಾಗಿ ಗ್ರೇಡ್-ಎ ಕೆಟಗರಿಯ ಆಫೀಸ್‌ ವರ್ಕ್‌ ಸ್ಪೇಸ್‌ ಸಿಗಲಿದೆ.

ಇಲ್ಲಿ ಮೀಟಿಂಗ್ ರೂಮ್‌ಗಳು, ಕೆಫೆಟೇರಿಯಾಗಳು, ಮನರಂಜನಾ ವಲಯಗಳು ಮತ್ತು ಕಾನ್ಫರೆನ್ಸ್ ಹಾಲ್‌ಗಳಂತಹ ಅತ್ಯಾಧುನಿಕ ಸೌಲಭ್ಯಗಳು ಇರಲಿವೆ. ಪಾರ್ಕಿಂಗ್ ಸೇರಿ ಒಟ್ಟು ನಿರ್ಮಾಣ ಪ್ರದೇಶದ ಶೇ.75ರಷ್ಟು ಭಾಗವನ್ನು ವಾಣಿಜ್ಯ ಕಚೇರಿಗಳಿಗಾಗಿ ಮೀಸಲಿಡಲಾಗುವುದು. ಉಳಿದ ಶೇ.25ರಷ್ಟು ಜಾಗದಲ್ಲಿ ಫುಡ್ ಕೋರ್ಟ್‌ಗಳು, ರಿಟೇಲ್ ಅಂಗಡಿಗಳು, ಹೋಟೆಲ್‌ಗಳು ಮತ್ತು ಸರ್ವಿಸ್ ಅಪಾರ್ಟ್‌ಮೆಂಟ್‌ಗಳಂತಹ ಮೂಲಸೌಕರ್ಯಗಳನ್ನು ನಿರ್ಮಿಸಲಾಗುವುದು.

ಟೆಂಡರ್ ದಾಖಲೆಗಳ ಪ್ರಕಾರ, ಎಫ್‌ಎಆರ್‌ ಅಡಿಯಲ್ಲಿ ಒಟ್ಟು 3 ಲಕ್ಷದ 52 ಸಾವಿರದ 156 ಚದರ ಅಡಿ ನಿರ್ಮಾಣಕ್ಕೆ ಅವಕಾಶವಿದೆ. ಅಲ್ಲದೆ, ಪ್ರೀಮಿಯಂ ಎಫ್‌ಎಆರ್‌ ಮತ್ತು ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳು ಅಂದ್ರೇ ಟಿಡಿಆರ್‌ ಮೂಲಕ ಅದನ್ನು ಇನ್ನಷ್ಟು ಹೆಚ್ಚಿಸಲು ಡೆವಲಪರ್‌ಗಳಿಗೆ ಅವಕಾಶ ನೀಡಲಾಗಿದೆ. ಕನಿಷ್ಠ ಅಭಿವೃದ್ಧಿ ಪ್ರದೇಶದ ನಿರ್ಮಾಣಕ್ಕೆ ಸುಮಾರು ಮೂರು ವರ್ಷಗಳು ಆಗಬಹುದು ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದಾದ್ಯಂತ ದೃಢವಾದ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಸರ್ಕಾರದ ಬದ್ಧತೆಯನ್ನು ಈ ಯೋಜನೆ ತೋರಿಸುತ್ತದೆ. ಮಂಗಳೂರಿನ ಬ್ಲೂಬೆರ್ರಿ ಹಿಲ್ಸ್‌ನಲ್ಲಿ ಹೊಸ ಟೆಕ್ ಪಾರ್ಕ್ ನಿರ್ಮಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು 11,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದಿದ್ದಾರೆ.

ಲೀಪ್‌ ಅಡಿಯಲ್ಲಿ ಮಂಗಳೂರು ಟೆಕ್‌ ಹಬ್‌ ! ಇನ್ನು, ಮಂಗಳೂರು ಈಗಾಗಲೇ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಅಂದ್ರೇ ಜಿಎಸ್‌ಡಿಪಿಗೆ ಸುಮಾರು ಶೇ. 5.5 ರಷ್ಟು ಕೊಡುಗೆ ನೀಡುತ್ತಿದೆ. ಇದು ಐಟಿ, ಫಿನ್‌ಟೆಕ್ ಮತ್ತು ಸಾಗರ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಬಲವಾಗಿ ಬೆಳೆಯುತ್ತಿರುವ ಕೇಂದ್ರವಾಗಿದೆ. ಸರ್ಕಾರದ ಲೋಕಲ್ ಎಕನಾಮಿಕ್ ಆಕ್ಸಿಲರೇಶನ್ ಪ್ರೋಗ್ರಾಂ ಅಂದ್ರೇ ಲೀಪ್‌ ಅಡಿಯಲ್ಲಿ ಈ ಟೆಕ್ ಪಾರ್ಕ್ ಮಂಗಳೂರನ್ನು ಮುಂದಿನ ಉನ್ನತ ಬೆಳವಣಿಗೆಯ ಕಾರಿಡಾರ್ ಆಗಿ ಪರಿವರ್ತಿಸಲಿದೆ ಎಂದು ಸರ್ಕಾರ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದೆ.

ಇನ್ನು, ಮಂಗಳೂರು ಕೇವಲ ಕೈಗಾರಿಕಾ ಕೇಂದ್ರವಲ್ಲ, ಜ್ಞಾನದ ಕೇಂದ್ರವೂ ಹೌದು. ಇಲ್ಲಿ ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ , ಮಣಿಪಾಲದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕಸ್ತೂರಬಾ ಮೆಡಿಕಲ್ ಕಾಲೇಜಿನಂತಹ ಉನ್ನತ ಶಿಕ್ಷಣ ಸಂಸ್ಥೆಗಳಿವೆ. ಇದು ನುರಿತ ಮಾನವ ಸಂಪನ್ಮೂಲವನ್ನು ಒದಗಿಸಲು ಸಹಕಾರಿಯಾಗಿದೆ.

ಪ್ರಮುಖ ಬಂದರು, ತೈಲ ಸಂಸ್ಕರಣಾಗಾರ, ಐದು ರಾಷ್ಟ್ರೀಯ ಹೆದ್ದಾರಿಗಳು, ಎರಡು ರೈಲು ನಿಲ್ದಾಣಗಳು ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಅತ್ಯುತ್ತಮ ಸಂಪರ್ಕ ಜಾಲವನ್ನು ಮಂಗಳೂರು ಹೊಂದಿದೆ. ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ, ಉದ್ದೇಶಿತ ರಿಂಗ್ ರೋಡ್ ಮತ್ತು ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇ ಯೋಜನೆಗಳಿಂದಾಗಿ ಈ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ. ಈ ಎಲ್ಲಾ ಅಂಶಗಳು ಮಂಗಳೂರನ್ನು ಟೆಕ್ ಪಾರ್ಕ್‌ಗೆ ಸೂಕ್ತ ಸ್ಥಳವನ್ನಾಗಿಸಿದೆ.

ಕರ್ನಾಟಕದಾದ್ಯಂತ 11 ಸಂಸ್ಥೆಗಳ ಹೂಡಿಕೆ ಇತ್ತೀಚೆಗೆ ಕರ್ನಾಟಕ ಸರ್ಕಾರ 11 ಸಂಸ್ಥೆಗಳಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಅನುಮತಿ ನೀಡಿದೆ. ಬರೋಬ್ಬರಿ 27 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಯಾಗಲಿದ್ದು, ಸುಮಾರು 9000 ಉದ್ಯೋಗಗಳು ಸೃಷ್ಟಿಯಾಗಲಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಸ್‌ಎಫ್‌ಎಕ್ಸ್‌ ಇಂಡಿಯಾ ಬರೋಬ್ಬರಿ 9298 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದು, 806 ಉದ್ಯೋಗಗಳು ಸೃಷ್ಟಿಯಾಗಲಿವೆ. ಕ್ಯೂಪಿಐಎಐ ಇಂಡಿಯಾ 1136 ಕೋಟಿ ರೂಪಾಯಿ ಹೂಡಿಕೆ ಮಾಡಿ, 200 ಜಾಬ್‌ ಕ್ರಿಯೆಟ್‌ ಮಾಡಲಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಜೆಎಸ್‌ಡಬ್ಲ್ಯೂನ ಎರಡು ಸಂಸ್ಥೆಗಳು 8,402 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡುತ್ತಿದ್ದು, ಇದರಿಂದ 1171 ಉದ್ಯೋಗಗಳು ಸೃಷ್ಟಿಯಾಗಲಿವೆ. ವಿಜಯಪುರದಲ್ಲಿ ರಿಲಾಯನ್ಸ್‌ ಕಂಪನಿಯು 1622 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದು, 1200 ಜಾಬ್‌ ಕ್ರಿಯೆಟ್‌ ಆಗಲಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಸ್ನೈಡರ್‌ ಎಲೆಕ್ಟ್ರಿಕ್‌, ಟೊಯೊಟೋ ಇಂಡಸ್ಟ್ರೀಸ್‌, ತೇಜಸ್‌ ನೆಟ್‌ವರ್ಕ್‌ ಕಂಪನಿಗಳು 3392 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದು, 2412 ಉದ್ಯೋಗಗಳು ಸೃಷ್ಟಿಯಾಗಲಿದೆ.

ಚಾಮರಾಜನಗರದಲ್ಲಿ ವಾಯು ಅಸೆಟ್ಸ್‌ 1251 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, 1912 ಜಾಬ್‌ ಸೃಷ್ಟಿಯಾಗುತ್ತಿವೆ. ಹಾವೇರಿಯಲ್ಲಿ ಗ್ರೇಸಿಮ್‌ 1386 ಕೋಟಿ ರೂಪಾಯಿ ಹೂಡಿದ್ದು, 203 ಉದ್ಯೋಗಗಳು ಸೃಷ್ಟಿಯಾಗಲಿವೆ. ಶಿವಮೊಗ್ಗದಲ್ಲಿ ಎಚ್‌ಎಸ್‌ಎಸ್‌ ಟೆಕ್ಸ್ಟ್‌ಟೈಲ್‌ 740 ಕೋಟಿ ರೂಪಾಯಿ ಇನ್ವೆಸ್ಟ್‌ ಮಾಡಿದ್ದು, 800 ಕೆಲಸಗಳು ಸೃಷ್ಟಿಯಾಗಲಿವೆ.”

Leave a comment

Leave a Reply

Your email address will not be published. Required fields are marked *

Related Articles

ವಂದೇ ಮಾತರಂ’ ಹಾಡುವುದು ಕಡ್ಡಾಯ: ಏಕಪಕ್ಷೀಯ ಮತೀಯ ಅಜೆಂಡಕ್ಕೆ ವಿರೋಧ:: ಜಮಿಯತ್ ಉಲಮಾ-ಇ -ಹಿಂದ್

ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂ ಗೀತೆ ಕುರಿತು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ...

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಕಲು ಹದಿನೆಂಟು ಅಭ್ಯರ್ಥಿಗಳ ಬಂಧನ

“ಬೆಂಗಳೂರು: ಇತ್ತೀಚೆಗೆ ನಡೆದ ಸೇನಾ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗೆ ಹಾಜರಾದ ಹದಿನೆಂಟು ಅಭ್ಯರ್ಥಿಗಳನ್ನು ವಂಚನೆ...

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೈಕೋರ್ಟ್ ಬಿಗ್ ಶಾಕ್  ನಿರೀಕ್ಷಣಾ ಜಾಮೀನು ಅರ್ಜಿ ವಜಾ

“ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್...

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ ದಾಖಲಿಸದಂತೆ ಹೊಸ ಮಾರ್ಗಸೂಚಿ

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ “ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂಬುದನ್ನು ಗಮನಿಸಿದ...