ಅಮರಾವತಿ/ವಿಶಾಖಪಟ್ಟಣ:ಆಂಧ್ರಕ್ಕೆ ಅಪ್ಪಳಿಸಲಿರುವ ಮೊಂಥಾ ಸೈಕ್ಲೋನ್; ವಿಮಾನ, ರೈಲು ಸಂಚಾರ ರದ್ದು ಎಲ್ಲೆಲ್ಲೂ ಅಲರ್ಟ್..ಅಲರ್ಟ್ ಮೊಂಥಾ ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಯತ್ತ ವೇಗವಾಗಿ ಸಮೀಪಿಸುತ್ತಿದ್ದು, ಇಂದು ಸಂಜೆ ಆಂಧ್ರ ಕರವಾಳಿ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆ ರೈಲ್ವೆ ಇಲಾಖೆಯೂ ರೈಲುಗಳ ಸಂಚಾರ 28, 29ರಂದು ರದ್ದು ಪಡಿಸಿದೆ. ವಿಮಾನ ಹಾರಾಟದಲ್ಲೂ ವ್ಯತ್ಯಯ ಇರಲಿದೆ ಎಂದು ವಿಮಾನಯಾನ ಸಂಸ್ಥೆಗಳು ಮಾಹಿತಿ ನೀಡಿವೆ. ಕರ್ನಾಟಕದಲ್ಲೂ ವಿಮಾನ ಮತ್ತು ಹಲವು ರೈಲು ಸಂಚಾರದಲ್ಲಿ ವ್ಯತ್ಯಯ ಇರಲಿದೆ.
‘ಮೊಂಥಾ’ ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಯತ್ತ ಸಮೀಪಿಸುತ್ತಿದ್ದಂತೆ, ರಾಜ್ಯಾದ್ಯಂತ ತೀವ್ರ ಆತಂಕ ಸೃಷ್ಟಿಯಾಗಿದೆ. ಅಕ್ಟೋಬರ್ 28ರ ಸಂಜೆ ಅಂದರೆ ಇಂದು ಸಂಜೆ ಅಥವಾ ರಾತ್ರಿಯ ವೇಳೆಗೆ ಚಂಡಮಾರುತ ಅಪ್ಪಳಿಸಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಂಡಮಾರುತವು ಕಾಕಿನಾಡ ಬಳಿ, ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಕರಾವಳಿಯನ್ನು ದಾಟುವ ನಿರೀಕ್ಷೆಯಿದ್ದು, ಈ ವೇಳೆ ಗಂಟೆಗೆ 90-100 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಕೆಲವೊಮ್ಮೆ 110 ಕಿ.ಮೀ. ವೇಗವನ್ನು ತಲುಪುವ ಸಾಧ್ಯತೆಯಿದೆ. ಹೀಗಾಗಿ ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಸಾರಿಗೆ ಸೇವೆಗಳ ಮೇಲೆ ಪರಿಣಾಮ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆ ರೈಲ್ವೆ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಅಕ್ಟೋಬರ್ 28 ಮತ್ತು 29ರಂದು ಕರಾವಳಿ ಆಂಧ್ರದಾದ್ಯಂತ 65ಕ್ಕೂ ಹೆಚ್ಚು ಪ್ಯಾಸೆಂಜರ್ ಮತ್ತು ಎಕ್ಸ್ಪ್ರೆಸ್ ರೈಲುಗಳ ಸಂಚಾರ ಸೇವೆ ಸ್ಥಗಿತಗೊಳಿಸಲಾಗಿದೆ. ವಿಜಯವಾಡ, ರಾಜಮಂಡ್ರಿ, ಕಾಕಿನಾಡ, ವಿಶಾಖಪಟ್ಟಣ ಮತ್ತು ಭೀಮಾವರಂ ಮಾರ್ಗದಲ್ಲಿ ಸಂಚರಿಸುವ ಪ್ರಮುಖ ರೈಲುಗಳು ಇದರಲ್ಲಿ ಸೇರಿವೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ನಂತರ ಸುರಕ್ಷತಾ ಪರಿಶೀಲನೆ ನಡೆಸಿ ರೈಲು ಸೇವೆಗಳನ್ನು ಪುನರಾರಂಭಿಸಲಾಗುವುದು.
ಪೂರ್ವ ಕರಾವಳಿ ರೈಲ್ವೆ ಕೂಡ ಒಡಿಶಾ-ಆಂಧ್ರ ಕಾರಿಡಾರ್ನಲ್ಲಿ ಹಲವಾರು ಸೇವೆಗಳನ್ನು ರದ್ದುಪಡಿಸಿದೆ.(ಮೊಂಥಾ ಚಂಡಮಾರುತ ಎಂದರೆ ಏನು, ಈ ಹೆಸರಿಟ್ಟಿದ್ಯಾಕೆ?) ಅಪ್ಪಳಿಸಲಿದೆ ಮೋಂತಾ ಸೈಕ್ಲೋನ್; ಕರ್ನಾಟಕಕ್ಕೆ ಭಾರೀ ಮಳೆ ಅಲರ್ಟ್: ಯಾವ್ಯಾವ ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆ? ವಿಮಾನ ಹಾರಟದಲ್ಲೂ ವ್ಯತ್ಯಯ ಪ್ರತಿಕೂಲ ಹವಾಮಾನದಿಂದಾಗಿ ವಿಶಾಖಪಟ್ಟಣ ವಿಮಾನ ನಿಲ್ದಾಣದಿಂದ ಅಕ್ಟೋಬರ್ 28ರಂದು ಎಲ್ಲ ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಸೇವೆಗಳನ್ನು ರದ್ದುಪಡಿಸಲಾಗಿದೆ.

ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ತಮ್ಮ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸುವಂತೆ ವಿಮಾನಸಂಸ್ಥೆಗಳು ಮನವಿ ಮಾಡಿಕೊಂಡಿದೆ.(ಆಂಧ್ರದಲ್ಲಿ ಭಾರಿ ಮಳೆ ಎಫೆಕ್ಟ್ ಅಲರ್ಟ್ ಘೋಷಣೆ) ಜನರ ಸ್ಥಳಾಂತರ ಕಾರ್ಯ ಪ್ರಗತಿಯಲ್ಲಿದೆ ಆಂಧ್ರಪ್ರದೇಶ ಸರ್ಕಾರವು ಪೂರ್ವ ಮತ್ತು ಪಶ್ಚಿಮ ಗೋದಾವರಿ, ಕೋನಸೀಮಾ ಮತ್ತು ವಿಶಾಖಪಟ್ಟಣ ಜಿಲ್ಲೆಗಳ ತಗ್ಗು ಪ್ರದೇಶಗಳು ಹಾಗೂ ಅಪಾಯಕಾರಿ ವಲಯಗಳಲ್ಲಿರುವ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಆರಂಭಿಸಿದೆ.
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಅಧಿಕಾರಿಗಳಿಗೆ ವಿದ್ಯುತ್ ಮತ್ತು ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಮತ್ತು ತುರ್ತು ಆಶ್ರಯ ತಾಣಗಳು ಹಾಗೂ ವೈದ್ಯಕೀಯ ಘಟಕಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲು ಸೂಚನೆ ನೀಡಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ಈಗಾಗಲೇ ನಿಯೋಜಿಸಲಾಗಿದೆ. ಚಂಡಮಾರುತವು ಹಾದುಹೋಗುವವರೆಗೂ ಜನರು ಎಲ್ಲೆಲ್ಲಿ ಇದ್ದಾರೋ ಅಲ್ಲಿಯೇ ಸುರಕ್ಷಿತವಾಗಿರಲು, ಕರಾವಳಿ ಪ್ರದೇಶಗಳಿಗೆ ತೆರಳದಂತೆ ಮತ್ತು ಸುರಕ್ಷತಾ ಸಲಹೆಗಳನ್ನು ಪಾಲಿಸುವಂತೆ ಸರ್ಕಾರ ಮನವಿ ಮಾಡಿದೆ. ”
Leave a comment