ರಾಮನಗರ : ಈ ಹೆದ್ದಾರಿಯಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಖದೀಮರ ಆಟಾಟೋಪ ಶುರುವಾಗುತ್ತದೆ 2023ರ ಮಾರ್ಚ್ 12 ರಂದು ಹೆದ್ದಾರಿ ಉದ್ಘಾಟನೆಯಾದಾಗಿನಿಂದ ಇಲ್ಲಿಯವರೆಗೆ, ಈ ಮಾರ್ಗದಲ್ಲಿ ಒಟ್ಟು 27 ದರೋಡೆ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ಮೂರು ಹೆದ್ದಾರಿ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ
ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಜನರಿಗೆ ತ್ವರಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟರೂ, ಇದೀಗ ಪ್ರಯಾಣಿಕರ ಪಾಲಿಗೆ ಅತ್ಯಂತ ಅಸುರಕ್ಷಿತ ಮಾರ್ಗವಾಗಿ ಪರಿಣಮಿಸುತ್ತಿದೆ. ಅಪಘಾತಗಳ ಜೊತೆಗೆ, ಈ ಎಕ್ಸ್ಪ್ರೆಸ್ವೇ ದರೋಡೆಕೋರರ ನೆಚ್ಚಿನ ಅಡ್ಡೆಯಾಗುತ್ತಿದ್ದು, ರಾತ್ರಿ ವೇಳೆ ಸಂಚರಿಸುವವರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡ ಈ ಹೆದ್ದಾರಿಯಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಖದೀಮರ ಆಟಾಟೋಪ ಶುರುವಾಗುತ್ತದೆ. ವಿಶ್ರಾಂತಿಗಾಗಿ ರಸ್ತೆ ಬದಿ ವಾಹನ ನಿಲ್ಲಿಸುವವರನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸಲಾಗುತ್ತಿದ್ದು, ಇದು ಆತಂಕಕಾರಿ ಮಟ್ಟವನ್ನು ತಲುಪಿದೆ. ಒಂದೂವರೆ ವರ್ಷದಲ್ಲಿ 27 ದರೋಡೆ ಪ್ರಕರಣಗಳು 2023ರ ಮಾರ್ಚ್ 12 ರಂದು ಹೆದ್ದಾರಿ ಉದ್ಘಾಟನೆಯಾದಾಗಿನಿಂದ ಇಲ್ಲಿಯವರೆಗೆ, ಈ ಮಾರ್ಗದಲ್ಲಿ ಒಟ್ಟು 27 ದರೋಡೆ ಪ್ರಕರಣಗಳು ವರದಿಯಾಗಿವೆ.

ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 15 ಪ್ರಕರಣಗಳು ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ 12 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆದ ಎಲ್ಲಾ 12 ಪ್ರಕರಣಗಳನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಅಧಿಕಾರಿಯನ್ನೇ ಬಿಡದ ಖದೀಮರು ಈ ಹೆದ್ದಾರಿಯ ಅಸುರಕ್ಷತೆಗೆ ಇತ್ತೀಚಿನ ನಿದರ್ಶನವೆಂದರೆ, ತಮಿಳುನಾಡು ಮೂಲದ ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಪಿಎಸ್ಐ) ಒಬ್ಬರನ್ನೇ ದರೋಡೆ ಮಾಡಿರುವುದು.
ಅಕ್ಟೋಬರ್ 7ರಂದು ಮುಂಜಾನೆ 2 ಗಂಟೆ ಸುಮಾರಿಗೆ ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡ್ಯ ಬಳಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಪಿಎಸ್ಐ ಮೇಲೆ ದಾಳಿ ಮಾಡಿದ ಮೂವರು ದರೋಡೆಕೋರರು, ಅವರಿಂದ ಚಿನ್ನ, ನಗದು ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದರು. ಇದೇ ಸ್ಥಳದಲ್ಲಿ ಈ ಹಿಂದೆ 2024ರ ಏಪ್ರಿಲ್ 15ರಂದೂ ಮತ್ತೊಂದು ದರೋಡೆ ನಡೆದಿತ್ತು. ಮೂಲಸೌಕರ್ಯ ಕೊರತೆಯೇ ಪ್ರಮುಖ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿ ನಿರ್ಮಿಸಿದೆಯೇ ಹೊರತು, ಪ್ರಯಾಣಿಕರಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
119 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಅಧಿಕೃತವಾಗಿ ಒಂದೇ ಒಂದು ವಿಶ್ರಾಂತಿ ಸ್ಥಳ, ಶೌಚಾಲಯ ಅಥವಾ ರೆಸ್ಟೋರೆಂಟ್ ಇಲ್ಲ. ಇದರಿಂದಾಗಿ ಚಾಲಕರು ಅನಿವಾರ್ಯವಾಗಿ ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಬೇಕಾಗಿದ್ದು, ಇದು ದರೋಡೆಕೋರರಿಗೆ ಸುಲಭದ ತುತ್ತಾಗುತ್ತಿದೆ. ಅಲ್ಲದೆ, ಸರ್ವಿಸ್ ರಸ್ತೆಯಿಂದ ಎಕ್ಸ್ಪ್ರೆಸ್ವೇಗೆ ಸಂಪರ್ಕ ಕಲ್ಪಿಸುವ ತಂತಿಬೇಲಿ ಹಲವು ಕಡೆ ಕಿತ್ತುಹೋಗಿದ್ದು, ದ್ವಿಚಕ್ರ ವಾಹನಗಳಲ್ಲಿ ಬರುವ ಖದೀಮರು ಸುಲಭವಾಗಿ ಪ್ರವೇಶಿಸಿ, ದರೋಡೆ ಮಾಡಿ ಪರಾರಿಯಾಗುತ್ತಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ಮೂರು ಹೆದ್ದಾರಿ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ. ಆದರೆ, ಈ ವಾಹನಗಳು ರಾತ್ರಿ ವೇಳೆ ಗಸ್ತು ತಿರುಗುವ ಬದಲು, ಹೆಚ್ಚಾಗಿ ಹೋಟೆಲ್ ಅಥವಾ ಅಂಗಡಿಗಳ ಬಳಿ ನಿಂತಿರುತ್ತವೆ ಎಂಬುದು ಸಾರ್ವಜನಿಕರ ಗಂಭೀರ ಆರೋಪವಾಗಿದೆ. ಪೊಲೀಸರಿಗೇ ರಕ್ಷಣೆ ಇಲ್ಲ ಎಂದಾದರೆ ಹೇಗೆ? “ಬೆಂಗಳೂರು-ಮೈಸೂರು ಹೆದ್ದಾರಿಯಿಂದ ತುಂಬಾ ಅನುಕೂಲವಾಗಿದೆ. ಆದರೆ, ಪಿಎಸ್ಐ ಅವರನ್ನೇ ದರೋಡೆ ಮಾಡಲಾಗಿದೆ ಎಂಬ ಸುದ್ದಿ ಕೇಳಿ ಭಯವಾಗುತ್ತಿದೆ.
ರಾತ್ರಿ ವೇಳೆ ಸಂಚರಿಸುವವರು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ ಪ್ರಯಾಣಿಕ ಅಭಿಷೇಕ್. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಕ್ಷಣವೇ ಎಚ್ಚೆತ್ತುಕೊಂಡು, ಪ್ರಯಾಣಿಕರ ಸುರಕ್ಷತೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸ್ಥಳೀಯ ಸಂಸದರು ಮತ್ತು ಶಾಸಕರು ಕೂಡ ಈ ಬಗ್ಗೆ ಗಮನಹರಿಸಿ, ಹೆದ್ದಾರಿಯನ್ನು ಸುರಕ್ಷಿತವಾಗಿಸಲು ಮುಂದಾಗಬೇಕಿದೆ.”

Leave a comment