ಪ್ರತಿಪಕ್ಷ ಜೆಡಿಎಸ್, ಜಾತಿ ಗಣತಿಗೆ ಗ್ರೇಟರ್ ಬೆಂಗಳೂರು ಅಥಾರಿಟಿ ಸತ್ತ ಸಿಬ್ಬಂದಿಯನ್ನು ನೇಮಕ ಮಾಡಿದೆ ಎಂದು ಗಂಭೀರ ಆರೋಪ ಮಾಡಿದೆ. ಸಿಬ್ಬಂದಿ ಪಟ್ಟಿಯನ್ನು ತನ್ನ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಸತ್ತ ಸಿಬ್ಬಂದಿಯಿಂದ ಸಮೀಕ್ಷೆ ಹೇಗೆ ಮಾಡಲು ಸಾಧ್ಯ ಎಂದು ಖಾರವಾಗಿ ಪ್ರಶ್ನಿಸಿದೆ.
ರಾಜ್ಯದಲ್ಲಿ ಮುಂದುವರೆದ ಜಾತಿ ಜನಗಣತಿ ಗೊಂದಲ. ಜಾತಿ ಸಮೀಕ್ಷೆಗೆ ಸತ್ತ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಆರೋಪಿಸಿದ ಜೆಡಿಎಸ್. ಕಾಂಗ್ರೆಸ್ ಸರ್ಕಾರ ಸತ್ತಿರುವ ಸಿಬ್ಬಂದಿಯನ್ನು ಬೇತಾಳದಂತೆ ಕಾಡುತ್ತಿದೆ ಎಂದು ವ್ಯಂಗ್ಯವಾಡಿದ ಜೆಡಿಎಸ್. ಜಾತಿ ಸಮೀಕ್ಷೆ ಅವಾಂತರದ ಬಗ್ಗೆ ಜೆಡಿಎಸ್ ಕಿಡಿ
ಬೆಂಗಳೂರು: ಕರ್ನಾಟಕ ಜಾತಿ ಸಮೀಕ್ಷೆ ಗೊಂದಲ ಬಗ್ಗೆ ಹಲವಾರು ಆಕ್ಷೇಪಗಳು ಕೇಳಿಬರುತ್ತಿವೆ. ಈ ಮಧ್ಯೆ ರಾಜಧಾನಿ ಬೆಂಗಳೂರಿನಲ್ಲಿ ಜಾತಿಗಣತಿಗೆ ಸತ್ತಿರುವ ಸಿಬ್ಬಂದಿಯನ್ನೂ ನೇಮಕ ಮಾಡಿರುವ ಆರೋಪ ಕೇಳಿಬಂದಿದೆ. ಈ ಕುರಿತು ತನ್ನ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿರುವ ಪ್ರತಿಪಕ್ಷ ಜಾತ್ಯಾತೀತ ಜನತಾದಳ (ಜೆಡಿಎಸ್) “ಜಾತಿ ಸಮೀಕ್ಷೆಗೆ ಸತ್ತ ಸಿಬ್ಬಂದಿ ನೇಮಕ ಮಾಡುವ ಮೂಲಕ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಈ ಸಮೀಕ್ಷೆ ಬಗ್ಗೆ ಅದೆಷ್ಟು ಗಂಭೀರವಾಗಿದೆ ಎಂಬುದನ್ನು ಸಾಬೀತುಪಡಿಸಿದೆ” ಎಂದು ತೀವ್ರ ವಾಗ್ದಾಳಿ ನಡೆಸಿದೆ.

ಬೆಂಗಳೂರು ಅಥಾರಿಟಿಯು ಬಿಡುಗಡೆ ಮಾಡಿರುವ ಜಾತಿ ಜನಗಣತಿ ಸಿಬ್ಬಂದಿ ಪಟ್ಟಿಯಲ್ಲಿ, ಮೂವರು ಸತ್ತಿರುವ ಸಿಬ್ಬಂದಿ ಹೆಸರೂ ಇದೆ ಎಂಬುದು ಜೆಡಿಎಸ್ನ ಆರೋಪವಾಗಿದೆ. ತನ್ನ ಆರೋಪಕ್ಕೆ ಪಕ್ಷವು ಸಿಬ್ಬಂದಿ ಪಟ್ಟಿಯ ಫೋಟೋವನ್ನು ಲಗತ್ತಿಸಿದೆ. ಜೆಡಿಎಸ್ ಟ್ವೀಟ್ನಲ್ಲೇನಿದೆ? ಜಾತಿ ಜನಗಣತಿ ಸಮೀಕ್ಷೆಗಾಗಿ ನೇಮಕಗೊಂಡಿರುವ ಸಿಬ್ಬಂದಿ ಪೈಕಿ ಕೆಲವರು ಈಗಾಗಲೇ ಇಹಲೋಕ ತ್ಯಜಿಸಿದ್ದು, ಅವರ ಹೆಸರನ್ನೂ ಸಿಬ್ಬಂದಿ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.ಗ್ರೇಟರ್ ಬೆಂಗಳೂರು ಅಥಾರಿಟಿಯು ಇಂತದ್ದೊಂದು ಅಚಾತುರ್ಯ ನಡೆಸಿದೆ ಎಂಬುದು ಜೆಡಿಎಸ್ನ ಆರೋಪವಾಗಿದೆ.
ಇತ್ತೀಚಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಜಾತಿ ಗಣತಿಗೆ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. “ಇದು ಸತ್ತ ಸರ್ಕಾರವೋ ಅಥವಾ ಬದುಕಿರುವಂತೆ ನಟಿಸುತ್ತಿರುವ ನಿರ್ಜೀವ ಸರ್ಕಾರವೋ? ಅಥವಾ ಸತ್ತವರನ್ನೂ ಬೆಂಬಿಡದೆ ಬೆನ್ನತ್ತಿರುವ ಬೇತಾಳ ಸರ್ಕಾರವೋ? ಅದಕ್ಕೆ ಸಾಕ್ಷ್ಯ ಇಲ್ಲಿದೆ. ಜಾತಿ ಸಮೀಕ್ಷೆಗೆ ಸತ್ತು ಹೋಗಿರುವ ಸಿಬ್ಬಂದಿಯನ್ನು ನಿಯೋಜಿಸಿದೆ.
ಈ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕನಿಷ್ಠ ಮಟ್ಟದ ಕಾಮನ್ ಸೆನ್ಸ್ ಅನ್ನೋದು ಇದೆಯ? ಸತ್ತವರು ಸ್ವರ್ಗದಿಂದ ಅಥವಾ ನರಕದಿಂದ ಬಂದು ಸಮೀಕ್ಷೆ ಮಾಡಲು ಸಾಧ್ಯವೇ?” ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ. ಮುಂದುವರೆದು, “ಸರ್ಕಾರಿ ಸೇವೆಯಿಂದ ನಿವೃತ್ತಿ ಆಗಿರುವ ಸಿಬ್ಬಂದಿ ಬಂದು ಸಮೀಕ್ಷೆ ಕೆಲಸ ಮಾಡಲು ಆಗುತ್ತದೆಯೇ? ಇದು ಮತಿಗೇಡಿ, ಬುದ್ಧಿಗೇಡಿ ಸರ್ಕಾರ. ಇವರು ಅದೆಷ್ಟು ಪಾರದರ್ಶಕವಾಗಿ ಸಮೀಕ್ಷೆ ಮಾಡುತ್ತಿದ್ದಾರೆ ಅನ್ನುವುದಕ್ಕೆ ಇದು ಒಂದು ಸ್ಯಾಂಪಲ್ ಅಷ್ಟೇ” ಎಂದು ಜೆಡಿಎಸ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಜಾತಿ ಜನಗಣತಿ ಸಮೀಕ್ಷೆದಾರರು ನಿಮ್ಮ ಮನೆಗೆ ಬಂದಿದ್ರಾ? ಏನ್ ಪ್ರಶ್ನೆ ಕೇಳಿದ್ರು? ಎಲ್ಲವೂ ಹೇಳಿದ್ರಾ, ಹೇಗಿದೆ ಸಮೀಕ್ಷೆ? ಜನ ಏನಂದ್ರು? ಜೆಡಿಎಸ್ ತನ್ನ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿರುವ ಸಿಬ್ಬಂದಿ ಪಟ್ಟಿಯಲ್ಲಿ ಒಟ್ಟು ಮೂವರು ಸಿಬ್ಬಂದಿಯ ಡೆಸಿಗ್ನೇಶನ್ ಕಾಲಂನಲ್ಲಿ Expired (ಕಾಲವಾಗಿದ್ದಾರೆ) ಎಂದು ಬರೆಯಲಾಗಿದೆ. ಹಾಗಿದ್ದರೆ ಸತ್ತಿರುವ ಸರ್ಕಾರಿ ಅಧಿಕಾರಿಗಳು ಅದ್ಹೇಗೆ ಜಾತಿ ಸಮೀಕ್ಷೆ ನಡೆಸಲು ಸಾಧ್ಯ? ಎಂಬುದು ಜೆಡಿಎಸ್ ಪ್ರಶ್ನೆಯಾಗಿದೆ.
“ಬೆಂಗಳೂರಿನಲ್ಲಿ ಜಾತಿ ಗಣತಿ ಸರಿಯಾಗಿ ನಡೆಯುತ್ತಿಲ್ಲ” ಎಂದು ಆರೋಪಿಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಅಚಾತುರ್ಯದ ಬಗ್ಗೆ ಗ್ರೇಟರ್ ಬೆಂಗಳೂಋಉ ಅಥಾರಿಟಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲವರು ಇದನ್ನು ಕಣ್ತಪ್ಪಿನಿಂದಾದ ಸಣ್ಣ ದೋಷ ಎಂದು ಹೇಳಿದರೆ, ಮತ್ತೆ ಕೆಲವರು ಸರ್ಕಾರ ಜಾತಿ ಗಣತಿಯ ಬಗ್ಗೆ ಗಂಭೀರವಾಗಿಲ್ಲ ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.”

Leave a comment