ಬಿಹಾರದಲ್ಲಿ ತುಂಬಿದ ಸಭೆಯಲ್ಲಿ ನರೇಂದ್ರ ಮೋದಿ ಅವರಿಗೆ ಎಲ್ಲರೂ ಎದ್ದೇಳಿ, ಹಾಂ ಅಲ್ಲಿ ಮೂಲೆಯಲ್ಲಿ ಕುಳಿತಿರುವರೂ ಎದ್ದೇಳಿ, ನಾವೆಲ್ಲರೂ ಎದ್ದು ನಿಂತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಚಪ್ಪಾಳೆ ತಟ್ಟೋಣ..” ಇದು ನಿನ್ನೆ ಪೂರ್ನಿಯಾದಲ್ಲಿ ನಡೆದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಸಮಾರಂಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿ ಅವರಿಗೆ ಜನರಿಂದ ಸ್ಟ್ಯಾಂಡಿಂಗ್ ಓವಷನ್ ಕೊಡಿಸಿದ ಪರಿ. ಬಿಹಾರ ರಾಜ್ಯದ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ಅವರ ಕೊಡುಗೆಗಳನ್ನು ನಿತೀಶ್ ಕುಮಾರ್ ಚಪ್ಪಾಳೆ ತಟ್ಟುವ ಮೂಲಕ ಸ್ಮರಿಸಿದ್ದಾರೆ.

ಪ್ರಧಾನಿ ಮೋದಿ ಅವರಿಗಾಗಿ ಎದ್ದುನಿಂತು ಚಪ್ಪಾಳೆ ತಟ್ಟುವಂತೆ ಸಭೀಕರಲ್ಲಿ ನಿತೀಶ್ ಕುಮಾರ್ ಮನವಿ. ನಿತೀಶ್ ಕುಮಾರ್-ಪ್ರಧಾನಿ ಮೋದಿ ಗೆಳೆತನಕ್ಕೆ ಸಾಕ್ಷಿಯಾದ ಪೂರ್ನಿಯಾ ಸಮಾರಂಭ. ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ ನಿತೀಶ್ ಕುಮಾರ್
ಪೂರ್ನಿಯಾ: ಒಂದು ಕಾಲದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಟು ಟೀಕಾಕಾರರಾಗಿದ್ದ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಈಗ ಪ್ರಧಾನಿ ಮೋದಿ ಅವರನ್ನು ಹೊಗಳುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುತ್ತಿಲ್ಲ.

ಇದಕ್ಕೆ ಉದಾಹರಣೆ ನಿನ್ನೆ(ಸೆ.15-ಸೋಮವಾರ) ಬಿಹಾರದ ಪೂರ್ನಿಯಾದಲ್ಲಿ ನಡೆದ ಸಭೆ ಸಾಕ್ಷಿ ಒದಗಿಸಿದೆ. ಹೌದು, ಪೂರ್ನಿಯಾದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಹಾರ ಸಿಎಂ ನಿತೀಶ್ ಕುಮಾರ್, ರಾಜ್ಯದ ಅಭಿವೃದ್ಧಿಗೆ ಪ್ರಧಾನಿ ಮೋದಿ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಅಲ್ಲದೇ ಇದಕ್ಕಾಗಿ ಎದ್ದು ನಿಂತು ಚಪ್ಪಾಳೆ ತಟ್ಟುವಂತೆ ಸಭೀಕರಲ್ಲಿ ಮನವಿ ಮಾಡಿದರು. ನಿತೀಶ್ ಅವರ ಈ ಮನವಿಗೆ ಸ್ಪಂದಿಸಿದ ಸಭೀಕರೆಲ್ಲರೂ, ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದರು. ಇದಕ್ಕೂ ಮೊದಲು ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ, ನಿತೀಶ್ ಕುಮಾರ್ ಅವರು ಎನ್ಡಿಎ ಜೊತೆಗೆ ಮುಂದುವರೆಯುವ ವಾಗ್ದಾನ ಮಾಡಿದ್ದಾರೆ”

Leave a comment