
7ನೇ ದಿನವಾದ ಮಂಗಳವಾರವೂ ಉತ್ಕನನ ಕಾರ್ಯ ಪುನರಾರಂಭಿಸಿದ ವಿಶೇಷ ತನಿಖಾ ತಂಡ(SIT)ಕ್ಕೆ ಯಾವುದೇ ಮಾನವ ಅಸ್ಥಿಪಂಜರದ ಅವಶೇಷಗಳು ಕಂಡುಬಂದಿಲ್ಲ ಎನ್ನಲಾಗಿದೆ.
ಭಾರೀ ಮಳೆಯ ನಡುವೆ ಸಾಕ್ಷಿ-ದೂರುದಾರ ತೋರಿಸಿರುವ 11 ಮತ್ತು 12ನೇ ಸ್ಥಳಗಳಲ್ಲಿ SITಯ ತನಿಖಾಧಿಕಾರಿ ಮತ್ತು ಪುತ್ತೂರು ವಿಭಾಗದ ಸಹಾಯಕ ಆಯುಕ್ತ(AC) ಸ್ಟೆಲ್ಲಾ ವರ್ಗೀಸ್ ಅವರ ಮೇಲ್ವಿಚಾರಣೆಯಲ್ಲಿ ಇಂದು ಸಹ ಸಮಾಧಿ ಅಗೆಯುವ ಕಾರ್ಯ ನಡೆಸಲಾಯಿತು.
ಆದರೆ ಯಾವುದೇ ಅವಶೇಷಗಳ ಕುರುಹು ಇಲ್ಲದ ಕಾರಣ SIT ಯ ಪ್ರಯತ್ನಗಳು ಯಾವುದೇ ಫಲಿತಾಂಶ ನೀಡಿಲ್ಲ. ಇಲ್ಲಿಯವರೆಗೆ SIT ಅಗೆದ 12 ಸ್ಥಳಗಳಲ್ಲಿ, ಕೇವಲ ಒಂದು ಸ್ಥಳದಲ್ಲಿ ಮಾತ್ರ ಮಾನವ ಅಸ್ಥಿಪಂಜರ ಪತ್ತೆಯಾಗಿದೆ ಎನ್ನಲಾಗಿದೆ.
ಏತನ್ಮಧ್ಯೆ, ಧರ್ಮಸ್ಥಳದಲ್ಲಿ ದಶಕದ ಹಿಂದೆ ನಾಪತ್ತೆಯಾಗಿದ್ದರು ಎನ್ನಲಾದ ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯ ಭಟ್ ಅವರ ತಾಯಿ ಸುಜಾತಾ ಭಟ್ ಅವರ ವಕೀಲರು, ‘ಸೋಮವಾರ ದೂರುದಾರರು ತೋರಿಸಿದ ಸ್ಥಳಗಳನ್ನು ಅಗೆದ ನಂತರ ಮೂರು ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ’ ಎಂದು ಹೇಳಿಕೊಂಡಿದ್ದಾರೆ.
ಸೋಮವಾರ ಪಾಯಿಂಟ್ 11ರಿಂದ 100 ಮೀಟರ್ ದೂರದಲ್ಲಿ ಮೂರು ಮಾನವ ಅಸ್ಥಿಪಂಜರ ಅವಶೇಷಗಳು ಪತ್ತೆಯಾಗಿವೆ. ಅವುಗಳಲ್ಲಿ ಒಂದು ಮಹಿಳೆಯದ್ದಾಗಿತ್ತು. ಅದೇ ಸ್ಥಳದಲ್ಲಿ ಮಹಿಳೆಯ ಸೀರೆ ಕೂಡ ಪತ್ತೆಯಾಗಿದೆ ಸುಜಾತ ಭಟ್ ಪರ ವಕೀಲ ಮಂಜುನಾಥ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿನ್ನೆಯ ಕಾರ್ಯಾಚರಣೆ ಯಶಸ್ವಿಯಾಗಿದೆ. ಏಕೆಂದರೆ ಎಸ್ಐಟಿ ಅನಾಮಿಕ ದೂರುದಾರನಿಗೆ ಹೊಸ ಜಾಗ ತೋರಿಸಲು ಅವಕಾಶ ನೀಡಿದೆ. ಇದರಿಂದ ನಿನ್ನೆಯ ಅಸ್ಥಿಪಂಜರ ಅಗೆಯುವ ಕಾರ್ಯ ಯಶಸ್ವಿಯಾಗಿತ್ತು. ಎಸ್ಐಟಿ ಸಹಿತ ಶೋಧ ನಡೆಸುತ್ತಿರುವ ತಂಡದ ಕಾರ್ಯಾಚರಣೆ ಶ್ಲಾಘನೀಯ ಅಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. “
ದೂರುದಾರರು ಮೊದಲ ದಿನ ಮಾಡಿದ ಆರಂಭಿಕ ಅಳತೆಗೆ ಬದ್ಧರಾಗಿ, ಆ ಸ್ಥಳದಿಂದ ಮಾತ್ರ ಅವಶೇಷಗಳನ್ನು ಹೊರತೆಗೆಯಬೇಕೆಂದು ಒತ್ತಾಯಿಸುವುದು ಅವೈಜ್ಞಾನಿಕ ಮಾತ್ರವಲ್ಲ, ಅರ್ಥಹೀನವೂ ಆಗಿರುತ್ತದೆ.
ಮೊದಲ ದಿನ ತೋರಿಸಿದ ಸ್ಥಳಗಳನ್ನು ಗುರುತಿಸುವ ಸ್ವಾತಂತ್ರ್ಯವಿರುವ ವ್ಯಕ್ತಿಗೆ, ಆರಂಭದಲ್ಲಿ ಗುರುತಿಸಿದ್ದು ನಂತರ ತಪ್ಪಾಗಿದೆ ಎಂದು ಕಂಡುಬಂದರೆ ತನ್ನನ್ನು ತಾನು ಸರಿಪಡಿಸಿಕೊಳ್ಳುವ ಸ್ವಾಭಾವಿಕ ಸ್ವಾತಂತ್ರ್ಯವೂ ಇರುತ್ತದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ಎರಡನೇ ದೂರು ಎಸ್ಐಟಿಗೆ ಹಸ್ತಾಂತರ ಆಗಸ್ಟ್ 1 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮಾನವ ಅವಶೇಷಗಳ ಪತ್ತೆ ಪ್ರಕರಣ ಮತ್ತು ಆಗಸ್ಟ್ 4 ರಂದು ಜಯಂತ್ ಎಂಬ ವ್ಯಕ್ತಿ ದಾಖಲಿಸಿದ್ದ ದೂರನ್ನು ಎಸ್ಐಟಿಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಮಹಾ ನಿರ್ದೇಶಕ ಎಂಎ ಸಲೀಂ ಅವರು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದ್ದ ಯುಡಿಆರ್ ಪ್ರಕರಣವನ್ನು ಹಸ್ತಾಂತರಿಸಲು ಆದೇಶಿಸಿದ್ದಾರೆ ಎಂದು ದಕ್ಷಿಣ ಕನ್ನಡ ಎಸ್ಪಿ ಡಾ. ಅರುಣ್ ಕೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a comment