*ಮಳೆಯಲ್ಲಿ ನೆನೆಯುತ್ತಿದ್ದ 85ರ ಅಸಹಾಯಕ ವೃದ್ಧರ ರಕ್ಷಣೆ:
ಉಡುಪಿ ಜೂ. 12 ಆದಿಉಡುಪಿಯ ಪಂದುಬೆಟ್ಟುವಿನಲ್ಲಿ ಮಳೆಯಲ್ಲಿ ನೆನೆಯುತ್ತಿದ್ದ ಅಸಹಾಯಕರಾಗಿ ದುಃಖಿಸುತ್ತಿದ್ದ ಬೀದಿಪಾಲಾದ ವೃದ್ದರನ್ನು ವಿಶು ಶೆಟ್ಟಿ ಅಂಬಲಪಾಡಿಯವರು ಅಂಬಲಪಾಡಿಯ ಪಂಚಾಯಿತಿ ಸದಸ್ಯೆ ಭಾರತಿ ಭಾಸ್ಕರ್ ಸಹಾಯದಿಂದ ರಕ್ಷಿಸಿ ಉದ್ಯಾವರದ ಕನಸಿನ ಮನೆ ಆಶ್ರಮಕ್ಕೆ ದಾಖಲಿಸಿದ ಘಟನೆ ನಡೆದಿದೆ.
ಸ್ಥಳೀಯರಾಗಿದ್ದ ವೃದ್ಧರು ಶಿವ ಪೂಜಾರಿ (85) ಅವಿವಾಹಿತರಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇದೀಗ ವೃದ್ಧಾಪ್ಯದಲ್ಲಿ ಅಸಹಾಯಕರಾಗಿ ಬೀದಿಪಾಲಾಗಿದ್ದಾರೆ.
ಧಾರಾಕಾರವಾಗಿ ಸುರಿಯುವ ಮಳೆಯಲ್ಲಿ ಸರಿಯಾಗಿ ಅನ್ನ ಆಹಾರವಿಲ್ಲದೆ ಸ್ಥಳೀಯ ದೈವಸ್ಥಾನದ ಕಲ್ಲು ಚಪ್ಪಡಿ ಆಡಿಯಲ್ಲಿ ಆಶ್ರಯ ಪಡೆದು ದುಃಖಿತರಾಗಿ ಅತಂತ್ರರಾಗಿದ್ದರು. ಮನೆ ಇಲ್ಲದ ವೃದ್ಧರು ಇತ್ತೀಚಿನ ದಿನಗಳಲ್ಲಿ ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದಿನಕಳೆಯುತ್ತಿದ್ದರು.
ಈ ಬಗ್ಗೆ ಪಂಚಾಯತ್ ಸದಸ್ಯೆ ವೃದ್ಧರನ್ನು ರಕ್ಷಿಸುವಂತೆ ಮನವಿ ಮಾಡಿದ್ದರು. ಸ್ಪಂದಿಸುವ ಸಂಬಂಧಿಕರು ಅಥವಾ ಸಂಬಂಧಪಟ್ಟವರು ಉದ್ಯಾವರ ಕನಸಿನ ಮನೆ ಆಶ್ರಮವನ್ನು ಸಂಪರ್ಕಿಸಲು ವಿಶು ಶೆಟ್ಟಿಯವರು ತಿಳಿಸಿದ್ದಾರೆ.