“ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಮತ್ತು ಅವರ ಹಿಂದೆ ಇರುವವರನ್ನು ಶಿಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾನು ಮತ್ತು ನಮ್ಮ ಪಕ್ಷ ಜೆಡಿಎಸ್ – ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಮಂಗಳವಾರ ಹೇಳಿದ್ದಾರೆ
. ಈ ವಿಷಯದಲ್ಲಿ ರಾಜಕೀಯ ಮಾಡಬಾರದು ಮತ್ತು ಪ್ರಧಾನಿ ಹಾಗೂ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಎಲ್ಲರೂ “ಒಗ್ಗಟ್ಟಾಗಿ ಬೆಂಬಲ ನೀಡಬೇಕು” ಎಂದು ಜೆಡಿ(ಎಸ್) ವರಿಷ್ಠ ಹೇಳಿದ್ದಾರೆ. “ಕಾಶ್ಮೀರ ಘಟನೆಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಪ್ರವಾಸಿಗರ ಮೇಲೆ ಮೊದಲ ಬಾರಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.
ಪಾಕಿಸ್ತಾನದ ಬೆಂಬಲದೊಂದಿಗೆ ಈ ಭಯೋತ್ಪಾದಕ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಕೇಂದ್ರ ಸರ್ಕಾರಕ್ಕೆ ಇದೆ” ಎಂದು ದೇವೇಗೌಡರು ತಿಳಿಸಿದರು. ರಾಜಕೀಯ ಪಕ್ಷದ ನಾಯಕನಾಗಿ, ಎನ್ಡಿಎ ಮುಖಂಡನಾಗಿ ಹೇಳುತ್ತಿದ್ದೇನೆ. ಕೇಂದ್ರದ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಕೇಂದ್ರದ ಜೊತೆಗೆ ನಾವೂ ನಿಲ್ಲುತ್ತೇವೆ. ಪ್ರಧಾನಿ ಮೋದಿಯವರು ನನಗೆ ಕರೆ ಮಾಡಿಲ್ಲ. ಮಾಡುವ ಅಗತ್ಯವೂ ಇಲ್ಲ. ಅನಿವಾರ್ಯ ಎನಿಸಿದರೆ ನಾನೇ ಪತ್ರ ಬರೆಯುತ್ತೇನೆ.
ಈ ಹಿಂದೆ ಸಾಕಷ್ಟು ಸಮಯದಲ್ಲಿ ಪತ್ರ ಬರೆದಿದ್ದೇನೆ. ಮುಂದೆಯೂ ಬರೆಯುತ್ತೇನೆ. ನನಗೆ ಅನಿಸಿದ್ದನ್ನ ನೇರವಾಗಿ ಹೇಳುತ್ತೇನೆ ಎಂದರು.
ಯುದ್ಧದ ಕುರಿತಾದ ಚರ್ಚೆಗಳು ಮತ್ತು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವ ಕುರಿತು ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ, ಭವಿಷ್ಯದಲ್ಲಿ ಏನಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಮತ್ತು ಪ್ರಧಾನಿ ಪರಿಸ್ಥಿತಿಯನ್ನು ಅವಲಂಬಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಮತ್ತು ಇಡೀ ದೇಶ ಅವರ ಮೇಲೆ ನಂಬಿಕೆ ಇಟ್ಟಿದೆ ಎಂದು ಹೇಳಿದರು.
“ಮೋದಿಯವರ ನಾಯಕತ್ವವನ್ನು ಇಡೀ ದೇಶ ಮತ್ತು ಪ್ರಪಂಚದಾದ್ಯಂತ ಗೌರವಿಸಲಾಗುತ್ತದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವಾರು ದೇಶಗಳು ಮತ್ತು ಅದರ ನಾಯಕರು ಈ ಘಟನೆಯನ್ನು ಖಂಡಿಸಿದ್ದಾರೆ ಮತ್ತು ಭಾರತಕ್ಕೆ ಬೆಂಬಲ ನೀಡಿದ್ದಾರೆ” ಎಂದರು.
ಕೆಲವು ಕಾಂಗ್ರೆಸ್ ನಾಯಕರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ಬಗ್ಗೆ ಮತ್ತು ಅವರ ಸಲಹೆಯ ಬಗ್ಗೆ ಕೇಳಿದಾಗ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪಕ್ಷ, ಪ್ರಧಾನಿಯವರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಈಗಾಗಲೇ ಹೇಳಿದ್ದಾರೆ ಎಂದರು. “
ಹಿರಿಯ ನಾಯಕರಾಗಿ, ಅವರು(ಖರ್ಗೆ) ಹೇಳಿದ್ದು ಮುಖ್ಯವಾಗುತ್ತದೆ ಮತ್ತು ಅದಕ್ಕೆ ಬೆಲೆ ಜಾಸ್ತಿ. ಉಳಿದವರ ಮಾತು ಬೇಡ. ಕಾಂಗ್ರೆಸ್ ಸಹಕಾರವೂ ಇದೆ ಎಂದು ನಾನು ಭಾವಿಸುತ್ತೇನೆ” ಎಂದು ಮಾಜಿ ಪ್ರಧಾನಿ ಹೇಳಿದರು.