ಈ ವರ್ಷದ ಹೋಳಿ ಹಬ್ಬವನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಹಬ್ಬ ಶುಕ್ರವಾದಂದು (ಮಾ.14) ಆಚರಿಸಲಾಗುತ್ತಿದೆ.
ಈ ನಡುವೆ ಶುಕ್ರವಾರದಂದು ಮಸೀದಿಗೆ ತೆರಳಬೇಕಿರುವುದರಿಂದ ಹೋಳಿ ಬಣ್ಣ ಹಾಕಬೇಡಿ ಎಂಬ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಆಕ್ಷೇಪಗಳ ಬಗ್ಗೆ ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆಗಳು ಈಗ ವೈರಲ್ ಆಗತೊಡಗಿವೆ.
ಸಂಭಾಲ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಚೌಧರಿ, ಹೋಳಿಯಲ್ಲಿ ಭಾಗವಹಿಸಲು ಇಚ್ಛಿಸದವರು ಮನೆಯೊಳಗೆ ಇರಬೇಕು ಎಂದು ಹೇಳಿರುವುದು ಈಗ ಎಲ್ಲೆಡೆ ವೈರಲ್ ಆಗತೊಡಗಿದೆ. ಹೋಳಿ ಬಣ್ಣಗಳ ಕುರಿತ ಆಕ್ಷೇಪಗಳಿಗೆ ಪೊಲೀಸ್ ಅಧಿಕಾರಿ ಖಡಕ್ ಕೌಂಟರ್ ನೀಡಿದ್ದನ್ನು ಯೋಗಿ ಆದಿತ್ಯನಾಥ್ ಬೆಂಬಲಿಸಿದ್ದಾರೆ.
ಹೋಳಿ ಹಬ್ಬ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತದೆ, ಶುಕ್ರವಾರಗಳು ವರ್ಷಕ್ಕೆ ಬಹಳಷ್ಟು ಬಾರಿ ಬರುತ್ತವೆ. ಶುಕ್ರವಾರದಂದು ಮಸೀದಿಗೇ ಹೋಗಬೇಕೆಂದೇನು ಇಲ್ಲ. ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬಹುದು ಹೋಳಿ ಬಣ್ಣ ಇಷ್ಟವಾಗದವರು ಮನೆಯಲ್ಲಿಯೇ ಇರಬಹುದು.
ಒಂದು ವೇಳೆ ಶುಕ್ರವಾರದಂದು ಮಸೀದಿಗೆ ಹೋಗಲೇಬೇಕೆಂಬ ಭಾವನೆ ಇರುವವರು ಹೋಳಿ ಬಣ್ಣಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಮಸೀದಿಗೆ ಹೋಗಿಬರಬಹುದು” ಎಂದು ಪೊಲೀಸ್ ಅಧಿಕಾರಿ ಹೇಳಿದ್ದರು.
ಪೊಲೀಸ್ ಅಧಿಕಾರಿಯ ಈ ಹೇಳಿಕೆ ಬಗ್ಗೆ ಇಂಡಿಯಾ ಟುಡೆ ಕಾನ್ಕ್ಲೇವ್ ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಪೊಲೀಸ್ ಅಧಿಕಾರಿ “ಪೆಹಲ್ವಾನ್” (ಕುಸ್ತಿಪಟು) ಆಗಿ ಮಾತನಾಡಿರಬಹುದು ಎಂದು ಹೇಳಿದ್ದು ಶುಕ್ರವಾರದ ನಮಾಜ್ ಅನ್ನು ಮಧ್ಯಾಹ್ನ 2 ಗಂಟೆಯ ನಂತರ ನಡೆಸಲು ನಿರ್ಧರಿಸಿದ್ದಕ್ಕಾಗಿ ಆದಿತ್ಯನಾಥ್ ಧಾರ್ಮಿಕ ಮುಖಂಡರಿಗೆ ಧನ್ಯವಾದ ತಿಳಿಸಿದ್ದಾರೆ. ಚೌಧರಿ ಮಾಜಿ ಕುಸ್ತಿಪಟು ಆಗಿದ್ದು ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಹಬ್ಬಗಳ ಸಮಯದಲ್ಲಿ ನಾವು ಪರಸ್ಪರರ ಭಾವನೆಗಳನ್ನು ಗೌರವಿಸಬೇಕು. ಪ್ರತಿ ಶುಕ್ರವಾರ ಪ್ರಾರ್ಥನೆ ಸಲ್ಲಿಸಲಾಗುತ್ತದೆ, ಆದರೆ ಹೋಳಿ ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ. ನಮಾಜ್ ಅನ್ನು ವಿಳಂಬ ಮಾಡಬಹುದು
, ಮತ್ತು ಯಾರಾದರೂ ಶುಕ್ರವಾರದ ಪ್ರಾರ್ಥನೆಗಳನ್ನು ಸಮಯಕ್ಕೆ ಸರಿಯಾಗಿ (ಸಾಮಾನ್ಯ ಸಮಯ ಮಧ್ಯಾಹ್ನ 1.30) ಸಲ್ಲಿಸಲು ಸಿದ್ಧರಿದ್ದರೆ, ಅವರು ತಮ್ಮ ಮನೆಯಲ್ಲಿಯೇ ಇದ್ದುಕೊಂಡು ಹಾಗೆ ಮಾಡಬಹುದು.
ನಮಾಜ್ಗಾಗಿ ಮಸೀದಿಗೆ ಹೋಗುವುದು ಕಡ್ಡಾಯವಲ್ಲ, ”ಎಂದು ಆದಿತ್ಯನಾಥ್ ಹೇಳಿದ್ದಾರೆ. ಸಂಭಾಲ್ ಪೊಲೀಸ್ ಅಧಿಕಾರಿಯ ಹೇಳಿಕೆಯ ಬಗ್ಗೆ ಉತ್ತರ ಪ್ರದೇಶದ ವಿರೋಧ ಪಕ್ಷಗಳು ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಕಳವಳ ವ್ಯಕ್ತಪಡಿಸಿದ್ದು, ಸರ್ಕಾರದ ಅಧಿಕಾರಿಗಳು ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಭಾಲ್ನಲ್ಲಿ ಗಲಭೆಯನ್ನು ರೂಪಿಸಿದ್ದು ಚೌಧರಿ ಎಂದು ಸಮಾಜವಾದಿ ಪಕ್ಷದ ಸಂಸದ ಮತ್ತು ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ:
“ಹಿಂಸಾಚಾರದ ಸಮಯದಲ್ಲಿ ಜನರನ್ನು ಪ್ರಚೋದಿಸಿದ ಪೊಲೀಸರಿಂದ ನೀವು ಏನನ್ನು ನಿರೀಕ್ಷಿಸಬಹುದು. ಆಡಳಿತ ಬದಲಾದಾಗ ಅಂತಹ ಜನರು ಜೈಲಿನಲ್ಲಿರುತ್ತಾರೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕೆಲವು ತಿಂಗಳ ಹಿಂದೆ ಪೊಲೀಸ್ ಸಮವಸ್ತ್ರದಲ್ಲಿ ಹನುಮಂತನ ಗದೆಯನ್ನು ಹಿಡಿದು ಧಾರ್ಮಿಕ ಮೆರವಣಿಗೆ ನಡೆಸುವಾಗ ಚೌಧರಿ ಸುದ್ದಿಯಾಗಿದ್ದರು. ಈ ಕಾರ್ಯಕ್ರಮದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡ ನಂತರ ವಿವರಣೆ ಕೋರಿ ಅವರಿಗೆ ನೋಟಿಸ್ ನೀಡಲಾಗಿತ್ತು.