ಚಿನ್ನದಂಗಡಿ ಮಾಲೀಕರಿಗೆ 9 ಕೋಟಿ ರೂ. ವಂಚನೆ ಪ್ರಕರಣ: ಐಶ್ವರ್ಯಾ ಗೌಡ ವಿರುದ್ಧ ದೂರು ನೀಡಿದ ಡಿಕೆ ಸುರೇಶ್ ಮಾಜಿ ಸಂಸದ ಡಿಕೆ ಸುರೇಶ್ ಅವರ ತಂಗಿ ಎಂದು ನಂಬಿಸಿ ಚಿನ್ನ ಪಡೆದು 9 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಐಶ್ವರ್ಯಾ ಗೌಡ ವಿರುದ್ಧ ಡಿಕೆ ಸುರೇಶ್ ದೂರು ದಾಖಲಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸುರೇಶ್, ಐಶ್ವರ್ಯಾ ಗೌಡ ಎಂಬುವವರು ನನ್ನ ಹೆಸರನ್ನು ದುರುಪಯೋಗಪಡಿಸಿಕೊಂಡು ಜನರಿಗೆ ವಂಚನೆ ಮಾಡುತ್ತಿರುವುದು ಮಾಧ್ಯಮಗಳಲ್ಲಿ ಕೆಲವು ದಿನಗಳಿಂದ ವರದಿಯಾಗುತ್ತಿದೆ.
ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಮಾಡಲು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬೆಂಗಳೂರು ನಗರ ಪೋಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದೇನೆ ಎಂದಿದ್ದಾರೆ.
ನನ್ನ ಸಾರ್ವಜನಿಕ ಜೀವನವನ್ನು, ಜನಸೇವೆಯ ಕಾರ್ಯವನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಇದೊಂದು ಪಾಠವಾಗಲಿ. ಯಾವುದೇ ಕಾರಣಕ್ಕೂ ನನ್ನ ಹೆಸರನ್ನು ಹೇಳಿಕೊಂಡು ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದರೆ ಮೋಸ ಹೋಗಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಡಿಕೆ ಸುರೇಶ್ ಅವರ ಸಹೋದರಿಯೆಂದು ನಂಬಿಸಿ ಖರೀದಿ ನೆಪದಲ್ಲಿ 9.82 ಕೋಟಿ ರೂ. ಮೌಲ್ಯದ 660 ಗ್ರಾಂ ಚಿನ್ನವನ್ನು ಪಡೆದು ವಂಚಿಸಿದ್ದಾರೆ ಎಂದು ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿಯ ಮಾಲೀಕರಾದ ವನಿತಾ ಎಸ್ ಐತಾಳ್
ಎಂಬುವವರು ನೀಡಿರುವ ದೂರಿನನ್ವಯ ಐಶ್ವರ್ಯಾ ಗೌಡ, ಹರೀಶ್ ಕೆಎನ್ ಹಾಗೂ ಕನ್ನಡದ ನಟ ಧರ್ಮೇಂದ್ರ ಬಿ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಐಶ್ವರ್ಯಾ ಗೌಡ 2023ರ ಅಕ್ಟೋಬರ್ನಿಂದ 2024 ಏಪ್ರಿಲ್ವರೆಗೆ ಹಂತ ಹಂತವಾಗಿ 9 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ ಖರೀದಿ ಮಾಡಿದ್ದಾರೆ. ಹಣ ಪಾವತಿ ಮಾಡುವಂತೆ ಕೇಳಿದಾಗ ಡಿಕೆ ಸುರೇಶ್ ಅವರಿಂದ ಕರೆ ಮಾಡಿಸಿ ಕಾಲಾವಕಾಶ ಕೋರಿದ್ದರಂತೆ.
ಜತೆಗೆ ನಟ ಧರ್ಮೇಂದ್ರ ಎಂಬುವವರಿಂದಲೂ ಕರೆ ಮಾಡಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಐಶ್ವರ್ಯಾ ಗೌಡ ಅವರ ಪತಿ ಹರೀಶ್ ಕೆಎನ್ ಕೂಡ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ನಾನು ಡಿಕೆ ಸುರೇಶ್ ತಂಗಿ, ನನಗೆ ಅನೇಕ ರಾಜಕೀಯ ವ್ಯಕ್ತಿಗಳ ಸಂಪರ್ಕವಿದೆ. ನಾನು ದೊಡ್ಡ ಬ್ಯುಸಿನೆಸ್ ವುಮೆನ್. ನಿಮಗೆ ಒಳ್ಳೆ ವ್ಯಾಪಾರ ವಹಿವಾಟು ನೀಡುತ್ತೇನೆ ಎಂದೆಲ್ಲ ಹೇಳಿ ವನಿತಾ ಅವರನ್ನು ಐಶ್ವರ್ಯಾ ನಂಬಿಸಿದ್ದರು ಎನ್ನಲಾಗಿದೆ.