“ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ಹಿಂಸಾಚಾರದ ಬಗ್ಗೆ ಇಸ್ಕಾನ್ ಬೆಂಗಳೂರು ಅಧ್ಯಕ್ಷ ಮಧು ಪಂಡಿತ್ ದಾಸ್ ಕಳವಳ ವ್ಯಕ್ತಪಡಿಸಿದ್ದು, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ನೆರೆಯ ದೇಶಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರ ಬಗ್ಗೆ ಒಗ್ಗಟ್ಟು ಪ್ರದರ್ಶಿಸಲು ಇಸ್ಕಾನ್ ದೇವಾಲಯ ಬಳಿ ಆಯೋಜಿಸಲಾದ ಶಾಂತಿಯುತ ಸಂಕೀರ್ತನೆಯಲ್ಲಿ ಮಾತನಾಡಿದ ದಾಸ್, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರದ ಬಗ್ಗೆ ವರದಿಗಳನ್ನು ನಾವು ನೋಡಿದ್ದೇವೆ. ಅಲ್ಲಿನ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ಹೊಂದಿರುವುದಾಗಿ ತಿಳಿಸಿದರು.
ಚಿನ್ಮೋಯ್ ಕೃಷ್ಣ ಪ್ರಭು, ಇಸ್ಕಾನ್ ಭಕ್ತರು ಸೇರಿದಂತೆ ಮತ್ತಿತರ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆಯನ್ನು ಬಾಂಗ್ಲಾದೇಶ ಸರ್ಕಾರ ಖಾತ್ರಿಪಡಿಸುತ್ತದೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದರು.
ಬಾಂಗ್ಲಾದೇಶ ಸನಾತನ ಜಾಗರಣ ಮಂಚ್ನ ವಕ್ತಾರ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ಢಾಕಾ ಪೊಲೀಸರು ಇತ್ತೀಚೆಗೆ ಬಂಧಿಸಿರುವುದು ಸೇರಿದಂತೆ ಇತ್ತೀಚಿನ ತಿಂಗಳುಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯ ದಾಳಿಗೆ ಒಳಗಾಗುತ್ತಿರುವುದನ್ನು ಮಧು ಪಂಡಿತ್ ದಾಸ್ ಪ್ರಸ್ತಾಪಿಸಿದರು.
ಇಂದು ಮತ್ತೆ ಚಟ್ಟೋಗ್ರಾಮದಲ್ಲಿ ಮೂರು ಹಿಂದೂ ದೇವಾಲಯಗಳ ಧ್ವಂಸ ಮಾಡಲಾಗಿದೆ.ಬಾಂಗ್ಲಾದಲ್ಲಿ ಹಿಂದೂ ದೇವಾಲಯಗಳನ್ನು ಗುರಿಯಾಗಿಸಲಾಗುತ್ತಿದೆ. ಸನಾತನ ಧರ್ಮದ ಅನುಯಾಯಿಗಳು ಗಂಭೀರ ದಾಳಿಗೆ ಒಳಗಾಗುತ್ತಿದ್ದಾರೆ. ಇದನ್ನು ನಿಲ್ಲಿಸಬೇಕಾಗಿದೆ ಎಂದು ಅವರು ಹೇಳಿದರು.