ಧರ್ಮಸ್ಥಳ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಭಾರೀ ಸುದ್ದಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸುತ್ತೇವೆ ಎಂದು ಹೇಳಿ ನಂತರ ಸ್ವಪಕ್ಷದವರಿಂದಲೇ ಮತ್ತು ಹೈಕಮಾಂಡ್ ನಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ನಿರ್ಧಾರದಿಂದ ಹಿಂದೆ ಸರಿದಿದ್ದರು.
ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹೆಚ್.ಕೆ.ಸುರೇಶ್ ಅಡ್ಡ ಮತದಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅದಕ್ಕೆ ಅವರು ಇಂದು ಧರ್ಮಸ್ಥಳ ಶ್ರೀ ಮಂಜುನಾಥ ಕ್ಷೇತ್ರಕ್ಕೆ ಹೋಗಿ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಸಮ್ಮುಖದಲ್ಲಿಯೇ ಆಣೆ ಮಾಡಿದ್ದಾರೆ.
ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ಮೇಲೆ ಆಣೆ-ಪ್ರಮಾಣ ಮಾಡಲು ನೂರಾರು ಬೆಂಬಲಿಗರು, ಕಾರ್ಯಕರ್ತರ ಜೊತೆ ಶಾಸಕ ಸುರೇಶ್ ಹೊರಟರು. ಇದಕ್ಕೂ ಮುನ್ನ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಆವರಣದಲ್ಲಿರುವ ಬಲಿ ಕಲ್ಲಿನ ಮೇಲೆ ಆಣೆ ಮಾಡಿದರು
ನಾನು ಅಡ್ಡ ಮತದಾನ ಮಾಡಿಲ್ಲ ಎಂದು ಶಾಸಕ ಹೆಚ್.ಕೆ.ಸುರೇಶ್ ಆಣೆ ಮಾಡಿದರು. ನಂತರ ಕರ್ಪೂರ ಹಚ್ಚಿ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದರು. ಧರ್ಮಸ್ಥಳದಲ್ಲಿ ಹೆಚ್ಕೆ ಸುರೇಶ್ ಪ್ರಮಾಣ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಹೆಚ್ಕೆ ಸುರೇಶ್, ದೇವರ ಮುಂದೆ ಮುಷ್ಟಿ ಕಾಣಿಕೆ ಹಾಕಿ ತಾನು ಅಡ್ಡ ಮತದಾನ ಮಾಡಿಲ್ಲ ಎಂದು ಪ್ರಮಾಣ ಮಾಡಿದರು.
ನಾನು ತಪ್ಪು ಮಾಡಿಲ್ಲ ಎಂದು ಮಂಜುನಾಥ ಸ್ವಾಮಿಯ ಎದುರು ಪ್ರಾರ್ಥನೆ ಸಲ್ಲಿಸಿದರು. ನಾನು ಹೃದಯ ಪೂರ್ವಕವಾಗಿ ಬಿಜೆಪಿಗೆ ಕೆಲಸ ಮಾಡ್ತಾ ಇದೇನೆ. ನಾನು ಈಗಲೂ ಬಿಜೆಪಿ, ಮುಂದೆಯೂ ಬಿಜೆಪಿಯೇ. ಆ ವಿಶ್ವಾಸ ನಂಬಿಕೆ ಉಳಿಸಿಕೊಳ್ಳಲು ಮಂಜುನಾಥ ಸ್ವಾಮಿ ಸಹಾಯ ಮಾಡಬೇಕು. ಚುನಾಯಿತನಾದ ಬಳಿಕ ಕಾಯಾವಾಚ ಮನಸಾ ಬಿಜೆಪಿ ಪರ ಕೆಲಸ ಮಾಡಿದ್ದೇನೆ. ನಾನು ಅಡ್ಡ ಮತದಾನ ಮಾಡಿಲ್ಲ, ಯಾವುದೇ ತಪ್ಪು ಮಾಡಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಿದರು
Leave a comment