- ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ಅತಿದೊಡ್ಡ ಲೂಟಿ ನಡೆದಿದ್ದು, ಹೋಲ್ಸೇಲ್ ಚಿನ್ನ ಖರೀದಿಸುವುದಾಗಿ ನಂಬಿಸಿ 3 ಕೋಟಿ ರೂ. ಮೌಲ್ಯದ 1 ಕೆಜಿ 850 ಗ್ರಾಂ ಚಿನ್ನಾಭರಣ ಕಳವು ಮಾಡಿ ಪರಾರಿಯಾದ ಘಟನೆ ಮಲ್ಲೇಶ್ವರದಲ್ಲಿ ನಡೆದಿದೆ.

ಚಿನ್ನಾಭರಣ ಕಂಪನಿಗೆ ವಂಚಿಸಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಆಭರಣಗಳೊಂದಿಗೆ ಪರಾರಿಯಾದ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಪರೇಶ್ ಸೋನಿ ಎಂಬಾತ ತಾನು ಹೋಲ್ಸೇಲ್ ಚಿನ್ನದ ವ್ಯಾಪಾರಿ ಎಂದು ಪರಿಚಯಿಸಿಕೊಂಡು, 3 ಕೆಜಿ ಚಿನ್ನದ ಆಭರಣಗಳು ಬೇಕೆಂದು ಅಂಗಡಿಗೆ ಕರೆ ಮಾಡಿದ್ದ. ಬಳಿಕ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ತನ್ನ ಕಚೇರಿಗೆ ಆಭರಣಗಳ ಸ್ಯಾಂಪಲ್ ತೆಗೆದುಕೊಂಡು ಬರುವಂತೆ ಸೂಚಿಸಿದ್ದ. ಅದರಂತೆ ಮಹೇಂದ್ರ ಕುಮಾರ್ ಜೈನ್ ಹಾಗೂ ಮತ್ತೊಬ್ಬ ಸಿಬ್ಬಂದಿ 3 ಕೆಜಿ ವಿವಿಧ ವಿನ್ಯಾಸದ ಚಿನ್ನಾಭರಣಗಳನ್ನು ತೆಗೆದುಕೊಂಡು ಆರೋಪಿಯ ಕಚೇರಿಗೆ ತೆರಳಿದ್ದರು.

ಸೋನಿ ತಾನು ಇಷ್ಟಪಟ್ಟ ಆಭರಣಗಳನ್ನು ಆಯ್ಕೆ ಮಾಡಿ, ಅವುಗಳನ್ನು ಯಂತ್ರವನ್ನು ಬಳಸಿ ಪರಿಶೀಲಿಸುವುದಕ್ಕೆ ಪಕ್ಕದ ಕ್ಯಾಬಿನ್ನಲ್ಲಿದ್ದ ರಾವ್ ಗೆ ನೀಡಿದ್ದಾರೆ. ರಾವ್, ಸುಮಾರು 1 ಕೆಜಿ, 850 ಗ್ರಾಂ ಆಭರಣಗಳನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ರಾವ್ ನನ್ನು ಹುಡುಕೋದಾಗಿ ಹೇಳಿ ಜೊತೆಗಿದ್ದ ಇನ್ನಿಬ್ಬರು ಆರೋಪಿಗಳು ಕೂಡ ಎಸ್ಕೇಪ್ ಆಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಕಳವಾಗಿರುವ ಚಿನ್ನಾಭರಣಗಳ ಮೌಲ್ಯ ಅಂದಾಜು 3 ಕೋಟಿ ರೂ. ಎಂದು ಹೇಳಲಾಗಿದೆ. ಆರೋಪಿಗಳು ಪೂರ್ವಯೋಜಿತವಾಗಿ ಮೋಸ ಮಾಡಿ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a comment