ಬಸವಕಲ್ಯಾಣ(ಬೀದರ್) : ಜಿಲ್ಲೆಯಲ್ಲಿ4.96 ಲಕ್ಷ ಮೆಟ್ರಿಕ್ ಟನ್ ಕೃಷಿಂಗ್ ಕಬ್ಬಿನ ಬಿಲ್ ಹಣಕ್ಕಾಗಿ ರೈತರ ಪರದಾಟ ಬಾಕಿ ಮೊತ್ತಕ್ಕೆ ಶೇ.15 ಬಡ್ಡಿ ಸಮೇತ ಪಾವತಿಗೆ ಡಿಸಿ ಶಿಲ್ಪಾ ಶರ್ಮಾ ಖಡಕ್ ಸೂಚನೆ
ಕಬ್ಬು ಸರಬರಾಜು ಮಾಡಿದ ರೈತರಿಗೆ ಒಂದು ತಿಂಗಳಾದರೂ ಬಿಲ್ ಮೊತ್ತ ಪಾವತಿಸದೆ ಬಾಕಿ ಇಟ್ಟುಕೊಂಡು ಸತಾಯಿಸುತ್ತಿರುವ ಜಿಲ್ಲೆಯ ಐದು ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ.
ಆ ಮೂಲಕ ಕಾನೂನಿನ ಬಿಸಿ ಮುಟ್ಟಿಸಿದೆ. ಕಬ್ಬು ನುರಿಸುವ ಕಾರ್ಯ ಮಾಡುತ್ತಿರುವ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಅಪಾರ ಪ್ರಮಾಣದ ಹಣವನ್ನು ಬಾಕಿ ಇರಿಸಿಕೊಂಡಿವೆ. ಬಾಕಿ ಉಳಿಸಿಕೊಂಡಿರುವ ಕಬ್ಬಿನ ಹಣವನ್ನು ತಕ್ಷಣವೇ ಪಾವತಿ ಮಾಡುವುದು.
ಇಲ್ಲವಾದರೆ ಬಾಕಿ ಉಳಿಸಿಕೊಂಡಿರುವ ಮೊತ್ತಕ್ಕೆ ಶೇ.15ರ ಬಡ್ಡಿಯೊಂದಿಗೆ ಬಾಕಿಯನ್ನು ಭೂಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ನಲ್ಲಿ ಎಚ್ಚರಿಕೆ ನೀಡಿದೆ.

2025-26ನೇ ಸಾಲಿನಲ್ಲಿ ಜಿಲ್ಲೆಯ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ(ಎನ್ನೆಸ್ಸೆಸ್ಕೆ), ಮಹಾತ್ಮಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ(ಎಂಜಿಎಸ್ಸೆಸ್ಕೆ), ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ(ಬಿಕೆಎಸ್ಕೆ), ಗೌರಿ ಸಕ್ಕರೆ ಮತ್ತು ಡಿಸ್ಟಿಲರಿ ಪ್ರೈ.ಲಿಮಿಟೆಡ್ ಘಟಕ ಭಾಲ್ಕಿ, ಭವಾನಿ ಶುಗರ್ಸ್ ಲಿ.ಬರೂರ ಸಕ್ಕರೆ ಕಾರ್ಖಾನೆಗಳು ಆರಂಭಿಸಿ ಡಿ.14ರ ಅಂತ್ಯಕ್ಕೆ 4,96,588.97 ಮೆಟ್ರಿಕ್ ಟನ್ ಕಬ್ಬು ಕೃಷಿಂಗ್ ಮಾಡಿವೆ.
ಆದರೆ ಕಬ್ಬು ಪೂರೈಕೆ ಮಾಡಿದ ರೈತರಿಗೆ ಇದುವರೆಗೂ ನಯಾಪೈಸೆ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ಮುಂದೆ ಜಿಲ್ಲೆಯಲ್ಲಿ ಏಕಕಾಲಕ್ಕೆ ಕಬ್ಬಿನ ಕಾರ್ಖಾನೆ ಪ್ರಾರಂಭ ಮಾಡಬೇಕು. ಆದರೆ ಕೆಲವರು ತಮಗೆ ಬೇಕಾದ ಸಮಯದಲ್ಲಿ ಕಾರ್ಖಾನೆಗಳು ಕಬ್ಬು ನುರಿಸುವಿಕೆ ಶುರು ಮಾಡಿದ್ದರಿಂದ ಹಲವು ಸಮಸ್ಯೆ ಎದುರಾಗುತ್ತಿದೆ.
ಅತಿವೃಷ್ಟಿ ಮತ್ತು ನೆರೆ ಹಾವಳಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಕಬ್ಬು ಬೆಳೆ ಆಸರೆಯಾಗಿದೆ. ಆದರೆ ಕಾರ್ಖಾನೆಗಳು ಮಾಲೀಕರು ಕಬ್ಬಿನ ಹಣ ಪಾವತಿಗೆ ಮೀನಾಮೇಷ ಮಾಡುತ್ತಿದ್ದರಿಂದ ಸಮಸ್ಯೆ ಉದ್ಭವಿಸಿದೆ.
ಕಬ್ಬಿನ ಬಿಲ್ ಪಾವತಿಗೆ ಸೂಚನೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ನಾನಾ ಸಕ್ಕರೆ ಕಾರ್ಖಾನೆಗಳಿಗೆ ಡಿ.14ರೊಳಗೆ 4.96 ಲಕ್ಷ ಮೆಟ್ರಿಕ್ ಟನ್ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಬ್ಬಿನ ಬಿಲ್ ಹಣ ಪಾವತಿಸಿಲ್ಲ. ಬಾಕಿ ಉಳಿಸಿಕೊಂಡ ಕಬ್ಬಿನ ಹಣ ತಕ್ಷಣವೇ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.

ಕಬ್ಬು ಸರಬರಾಜು ಮಾಡಿದ ರೈತರಿಗೆ 14 ದಿವಸದೊಳಗೆ ಕಬ್ಬಿನ ಹಣ ಪಾವತಿಸಬೇಕೆಂಬ ಕಾಯಿದೆ ಇದೆ. ಆದರೆ ಒಂದು ತಿಂಗಳಾದರೂ ರೈತರಿಗೆ ಕಬ್ಬಿನ ಹಣ ಪಾವತಿ ಮಾಡಿಲ್ಲ. ಹೀಗಾಗಿ ಬಾಕಿ ಉಳಿಸಿಕೊಂಡಿರುವ ಮೊತ್ತಕ್ಕೆ ಶೇ.15ರ ಬಡ್ಡಿಯೊಂದಿಗೆ ಕರ್ನಾಟಕ ಭೂಕಂದಾಯ ಕಾಯಿದೆ 1964ರ ಅವಕಾಶಗಳ ರೀತ್ಯ ಮತ್ತು ಕಬ್ಬು ನಿಯಂತ್ರಣ ಆದೇಶ 1966ರ ಕಲಂ 3(8)ರ ಪ್ರಕಾರ ಬಾಕಿಯನ್ನು ಭೂಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಾತಿಗೆ ಕ್ರಮ ವಹಿಸಲಾಗುವುದು ಎಂದು ನೋಟಿಸ್ ಪತ್ರದಲ್ಲಿ ಸೂಚಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ನಾನಾ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರ ಬಾಕಿ ಉಳಿಸಿಕೊಂಡ ಕಬ್ಬಿನ ಬಿಲ್ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಡಿ.15ರಂದು ಐದು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದಿದ್ದಾರೆ ಶಿಲ್ಪಾ ಶರ್ಮಾ, ಜಿಲ್ಲಾಧಿಕಾರಿ ಬೀದರ್ ಜಿಲ್ಲೆಯಲ್ಲಿ ಎರಡು ಸಹಕಾರ ಮತ್ತು ಮೂರು ಖಾಸಗಿ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವಿಕೆ ಆರಂಭಿಸಿ ಇದುವರೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಬ್ಬಿನ ಬಿಲ್ ಹಣ ಪಾವತಿಸಿಲ್ಲ. ಈ ಬಗ್ಗೆ ಕಾರ್ಖಾನೆಗಳ ಮಾಲೀಕರಿಗೆ ಸಾಕಷ್ಟು ಸಲ ಮೌಖಿಕವಾಗಿ ಬಿಲ್ ಹಣ ಪಾವತಿಗೆ ಸೂಚಿಸಲಾಗಿದೆ ಎಂದಿದ್ದಾರೆ ಪ್ರವೀಣ ಬರಗಲ್, ಉಪನಿರ್ದೇಶಕ,ಆಹಾರ ಇಲಾಖೆ”

Leave a comment