ಬಾಗಲಕೋಟೆ: ಹೊರ ರಾಜ್ಯಗಳ ನೋಂದಣಿ ವಾಹನ ಪತ್ತೆ ಮಾಡಿ ಟ್ಯಾಕ್ಸ್ ಹಾಕುತ್ತಿರುವ ಆರ್ಟಿಒ ಬಾಗಲಕೋಟೆಯಲ್ಲಿ ಎಸ್ಯುವಿ, ಕಾರ್, ಸೆಡಾನ್ ಸೇರಿ 60 ವಾಹನಗಳ ಮಾಲೀಕರಿಗೆ ತೆರಿಗೆ ನೋಟಿಸ್ ಹೊರ ರಾಜ್ಯದಲ್ಲಿ ಕಾರು ಖರೀದಿಸಿದವವರಿಗೆ ತೆರಿಗೆ ಬಿಸಿ
ಕಡಿಮೆ ತೆರಿಗೆ ಎನ್ನುವ ಕಾರಣಕ್ಕೆ ಭರ್ತಿ ಹಣ ಉಳಿಸಲು ಬೇರೆ ರಾಜ್ಯಗಳಿಂದ ಖರೀದಿಸಿದ ಕಾರ್ಗಳಿಗೆ ಈಗ ಜಿಲ್ಲೆಯಲ್ಲಿ ಭರ್ತಿ ತೆರಿಗೆ ಬೀಳುತ್ತಿದೆ. ಹೌದು, ಕರ್ನಾಟಕಕ್ಕಿಂತ ಕಡಿಮೆ ತೆರಿಗೆಯಿರುವ ರಾಜ್ಯಗಳಲ್ಲಿ ಕಾರ್ ಖರೀದಿಸಿದವರು ಈಗ ರಾಜ್ಯದ ಪಾಲಿನ ತೆರಿಗೆಪಾವತಿಸುತ್ತಿದ್ದಾರೆ. ಜಿಲ್ಲಾದ್ಯಂತ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ತಂಡ ಹೊರ ರಾಜ್ಯದ ನಂಬರ್ ಪ್ಲೇಟ್ ಗುರುತಿಸಿ ತೆರಿಗೆ ವಿಧಿಸುತ್ತಿದೆ.
ಫುಲ್ ಟ್ಯಾಕ್ಸ್ ಜಿಲ್ಲೆಯಲ್ಲಿಈವರೆಗೆ ಕಾರ್, ಸೆಡಾನ್, ಎಸ್ಯುವಿ ಸೇರಿದಂತೆ 60 ವಾಹನಗಳ ಮಾಲೀಕರಿಗೆ ತೆರಿಗೆ ವಿಧಿಸಲಾಗಿದೆ. 50ಕ್ಕೂ ಹೆಚ್ಚು ವಾಹನ ಮಾಲೀಕರು ಸ್ವಯಂಪ್ರೇರಿತರಾಗಿ ತೆರಿಗೆ ಪಾವತಿಸಿದ್ದಾರೆ. ಈವರೆಗೆ ಹೊರ ರಾಜ್ಯಗಳ ನೋಂದಣಿಯ ವಾಹನಗಳ ಮಾಲೀಕರಿಂದ ಅಂದಾಜು 80 ಲಕ್ಷ ರೂ. ತೆರಿಗೆ ವಸೂಲಿ ಮಾಡಲಾಗಿದೆ.

ಸಾರಿಗೆ ಇಲಾಖೆ ಹೊರ ರಾಜ್ಯಗಳ ನೋಂದಣಿ ವಾಹನಗಳನ್ನು ಪತ್ತೆ ಮಾಡುವ ಕಾರ್ಯಾಚರಣೆ ಮುಂದುವರಿಸಿದೆ. ತೆರಿಗೆ ತಪ್ಪಿಸಲು ಓಡಾಡಿದರೂ ಸಾರಿಗೆ ಅಧಿಕಾರಿಗಳು, ಪೊಲೀಸರ ಕೈಗೆ ಸಿಕ್ಕಿಬೀಳುವುದು ನಿಶ್ಚಿತ. ಹಣ ಉಳಿಸುವ ಆಸೆ: ದಕ್ಷಿಣ ಭಾರತದ ಪಾಂಡಿಚೇರಿ, ತೆಲಂಗಾಣ, ಗೋವಾ, ಉತ್ತರ ಭಾರತದ ಹೊಸದಿಲ್ಲಿಸೇರಿದಂತೆ ಹಲವೆಡೆ ವಾಹನ ಖರೀದಿಸಿದಾಗ ಕಡಿಮೆ ಪ್ರಮಾಣದ ತೆರಿಗೆ ವಿಧಿಸಲಾಗುತ್ತದೆ.
ಈ ಕಾರಣದಿಂದ ಹಲವು ವರ್ಷಗಳಿಂದ ಪಕ್ಕದ ರಾಜ್ಯಗಳಲ್ಲಿಕಾರ್, ಎಸ್ಯುವಿ ಸೇರಿದಂತೆ ನಾನಾ ವಾಹನಗಳನ್ನು ಜಿಲ್ಲೆಯ ಜನ ಖರೀದಿಸುತ್ತಿದ್ದಾರೆ. ನಾನಾ ರಾಜ್ಯಗಳ ಶೋರೂಂಗಳವರು ಗ್ರಾಹಕರನ್ನು ಆಕರ್ಷಿಸಲು ನಾನಾ ಕೊಡುಗೆಗಳನ್ನೂ ಘೋಷಿಸಿದ್ದರು. ಇಲ್ಲಿನ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಪ್ರತಿನಿಧಿಗಳನ್ನೂ ನೇಮಿಸಿದ್ದರು.
ಪಾಂಡಿಚೇರಿಯಲ್ಲಿ ಸುಲಭವಾಗಿ ವಾಹನ ಖರೀದಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಹೀಗಾಗಿ ದೂರದ ಊರಿಗೆ ಹೋಗಿ ಕಾರ್ ಖರೀದಿಸುವುದು ಹೇಗೆ ಎಂಬ ಚಿಂತೆಯಿರಲಿಲ್ಲ. ಪರಿಣಾಮ ನಾನಾ ರಾಜ್ಯಗಳ ಶೋರೂಂಗಳಲ್ಲಿ ವಾಹನ ಬುಕ್ ಮಾಡಿ ಜನ ಖರೀದಿಸುತ್ತಿದ್ದರು. ವಾಹನಗಳ ಮೇಲೆ ನಿಗಾ ರಾಜ್ಯದ ತೆರಿಗೆ ಸಂಗ್ರಹದಲ್ಲಿ ಕಡಿತವಾಗುತ್ತಿರುವುದನ್ನು ಗಮನಿಸಿದ ಕರ್ನಾಟಕ ಸರಕಾರ ತೆರಿಗೆ ಪಾವತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಸಾರಿಗೆ ಇಲಾಖೆಯಲ್ಲಿ ವಿಚಕ್ಷಣಾ ದಳಗಳನ್ನು ರಚಿಸಲಾಗಿದೆ. ಬೇರೆ ಜಿಲ್ಲೆಗಳಲ್ಲಿಕಾರ್ಯಾಚರಣೆ ನಡೆಸುವ ಈ ತಂಡದ ಅಧಿಕಾರಿಗಳು ವಾಹನಗಳ ಮಾಲೀಕರಿಗೆ ತೆರಿಗೆ ವಿಧಿಸುತ್ತಿದ್ದಾರೆ. ಜಿಲ್ಲೆಯಲ್ಲಿವಿಚಕ್ಷಣಾ ದಳ ಸಂಚರಿಸುತ್ತಿದ್ದು, ತೆರಿಗೆ ವಿಧಿಸುವ ಪ್ರಕ್ರಿಯೆ ಜೋರಾಗಿದೆ. ಬೇರೆ ರಾಜ್ಯಗಳ ನೋಂದಣಿ ವಾಹನಗಳಿದ್ದರೆ ಕಚೇರಿಗೆ ಬಂದು ತೆರಿಗೆ ಪಾವತಿಸಬೇಕು.
ನಮ್ಮ ರಾಜ್ಯದ ನೋಂದಣಿ ಮಾಡಿಸಿಕೊಳ್ಳಲು ನಿರಾಪೇಕ್ಷಣಾ ಪತ್ರ ಸಲ್ಲಿಸಬೇಕಾಗುತ್ತದೆ. ಸ್ವಯಂಪ್ರೇರಿತರಾಗಿಯೂ ವಾಹನ ಮಾಲೀಕರು ತೆರಿಗೆ ಪಾವತಿಸುತ್ತಿದ್ದಾರೆ. ಈ ಪ್ರಕ್ರಿಯೆಯಿಂದ ರಾಜಸ್ವ ಸಂಗ್ರಹ ಹೆಚ್ಚಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಚಂದ್ರಶೇಖರ ಪಾಟೀಲ ಅವರು ತಿಳಿಸಿದರು.”

Leave a comment