ಮುಂಬೈ ಪೊಲೀಸ್ ಇಲಾಖೆ ಸೇರಿದ ಕೆಲವೇ ತಿಂಗಳುಗಳಲ್ಲಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಕನ್ನಡಿಗ ಪೋಲಿಸ್ ಅಧಿಕಾರಿ ದಯಾ ನಾಯಕ್ ಮೂವತ್ತು ವರ್ಷಗಳ ಸೇವೆಯ ನಂತರ ಈ ತಿಂಗಳ ಅಂತ್ಯಕ್ಕೆ ವೃತ್ತಿಯಿಂದ ನಿವೃತ್ತರಾಗಲಿದ್ದಾರೆ.
1995ರಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ಸಬ್ ಇನ್ಸ್ಪೆಕ್ಟರ್ ಆಗಿ ಸೇರ್ಪಡೆಗೊಂಡ ದಯಾನಾಯಕ್, ಇದೀಗ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಹುದ್ದೆಯಿಂದ ನಿವೃತ್ತಿ ಹೊಂದಲಿದ್ದಾರೆ.
ಮುಂಬೈ ಅಂಡರ್ ವರ್ಲ್ಡ್ನ ಪಾಪಿಗಳ ಲೋಕಕ್ಕೆ ಪೊಲೀಸ್ ಪವರ್ ಏನೆಂಬುದನ್ನು ತೋರಿಸಿಕೊಟ್ಟವರು. ‘ಮುಂಬೈ ಮೇ ಅಬ್ ಗ್ಯಾಂಗ್ಸ್ಟರ್ ಲೋಗೋಂಕ ರಾಜ್ ನಹಿ ಚಲೇಗಾ” (ಮುಂಬೈನಲ್ಲಿ ಇನ್ನೂ ಗ್ಯಾಂಗ್ಸ್ಟರ್ಗಳ ಕಾರುಬಾರು ನಡೆಯುವುದಿಲ್ಲ) ಎಂಬುದನ್ನು ಸಾಬೀತುಪಡಿಸಿದವರು.
ಲಷ್ಕರ್ ಇ ತೋಯ್ದಾ ಭಯೋತ್ಪಾದನೆ ಸಂಘಟನೆಯ ಸದಸ್ಯರ ಸಹಿತ ಕುಖ್ಯಾತ ಗ್ಯಾಂಗ್ಸ್ಟರ್ಗಳಾದ ದಾವುದ್ ಇಬ್ರಾಹಿಂ, ಛೋಟಾ ಶಕೀಲ್, ಚೋಟಾ ರಾಜನ್, ಅಬು ಸಲಿಂ ಅರುಣ್ ಗೌಳಿ, ರವಿ ಪೂಜಾರಿ ಗ್ಯಾಂಗ್ನ ಸುಮಾರು 85 ಜನರನ್ನು ಎನ್ಕೌಂಟರ್ ಮಾಡುವ ಮೂಲಕ ದೇಶಾದ್ಯಂತ ಸುದ್ದಿ ಮಾಡಿದವರು.
ಹುಟ್ಟೂರು ಕಾರ್ಕಳ ತಾಲೂಕಿನ ಎಣ್ಣೆಹೊಳೆಯಲ್ಲಿ ಸರಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಿದ ದಯಾನಾಯಕ್, ಸಾವಿರಾರು ಮಕ್ಕಳ ಭವಿಷ್ಯ ರೂಪಿಸಲು ನೆರವಾಗಿದ್ದರು.
ವೃತ್ತಿ ಜೀವನದ ಆರಂಭದ ದಿನಗಳಿಂದಲೇ ದಯಾನಾಯಕ್ ತಮ್ಮದೊಂದು ವೈಶಿಷ್ಟ್ಯವನ್ನು ಉಳಿಸಿ ಬೆಳೆಸಿಕೊಂಡು ಬಂದವರು. ಭಾರತದ ಅತ್ಯುನ್ನತ ಬೇಹುಗಾರಿಕಾ ಸಂಸ್ಥೆ ‘ರಾ’ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳ ಕಾರ್ಯಾಚರಣೆಗೂ ಸಹಕಾರ ನೀಡಿದವರು.
ವೃತ್ತಿಜೀವನದಲ್ಲಿ ಬಂದ ಸೋಲನ್ನು, ಅನುಭವಿಸಿದ ಅವಮಾನವನ್ನು ಒಂದು ಕೈಯಿಂದ ಆಚೆಗೆ ದೂಡುತ್ತಲೇ ವಿಜಯದ ಯಾತ್ರೆಯನ್ನು ಕೈಗೊಂಡ ಅವರು ನಿಂದಕರ ಕಡೆ ಯಾವತ್ತೂ ತಿರು-ಗಿಯೂ ನೋಡಿದವರಲ್ಲ. ಕೊಟ್ಟ ಮಾತು, ಇಟ್ಟ ಹೆಜ್ಜೆಯಿಂದ ಹಿಂದೆ ಸರಿದ ಉದಾಹರಣೆಗಳಿಲ್ಲ.