ನವದೆಹಲಿ: ಹಿಂದೂಗಳ ಪವಿತ್ರ ಯಾತ್ರಾತಾಣ ಅಮರನಾಥ ಕ್ಷೇತ್ರಕ್ಕೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ನಿಯೋಜನೆಗೊಂಡಿದ್ದ ಬಿಎಸ್ ಎಫ್ ಸೈನಿಕರ ಪ್ರಯಾಣಕ್ಕೆ ಗುಜರಿ ರೈಲು ನಿಯೋಜನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಹೌದು.. ಮುಂಬರುವ ಅಮರನಾಥ ಯಾತ್ರೆಗೆ ಭದ್ರತೆಗಾಗಿ ನಿಯೋಜಿಸಲಾದ ಸುಮಾರು 1200 ಬಿಎಸ್ಎಫ್ ಯೋಧರು ಸೋಮವಾರ ಉದಯಪುರದಿಂದ ಜಮ್ಮುವಿಗೆ ಪ್ರಯಾಣ ಬೆಳೆಸಿದ್ದ ರೈಲು ಅತ್ಯಂತ ಕಳಪೆ ಸ್ಥಿತಿಯಲ್ಲಿತ್ತು ಎನ್ನಲಾಗಿದೆ. ಈ ಕುರಿತು ಯೋಧರೇ ವಿಡಿಯೋ ಹಂಚಿಕೊಂಡಿದ್ದು ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಅಂತೆಯೇ ರೈಲಿನ ಸ್ಥಿತಿ ಕಂಡುಕೊಂಡ ಯೋಧರು ನಂತರ ರೈಲು ಹತ್ತಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರೈಲಿನ ಕಿಟಕಿಗಳು ಮುರಿದಿವೆ.
ರೈಲಿನ ಒಳಗಿನ ಸೀಟುಗಳ ಕುಶನ್ ಗಳು ಹರಿದಿದ್ದು, ರೈಲಿನ ಮೇಲ್ಟಾವಣಿ ಮುರಿದು ಮಳೆ ಬಂದರೆ ಮಳೆ ನೀರು ರೈಲಿನ ಬೋಗಿಯೊಳಗೇ ನುಗ್ಗುತ್ತದೆ. ಇನ್ನು ರೈಲಿನ ಶೌಚಾಲಯ ನೋಡಿದರೆ ವಾಕರಿಕೆ ಬರುತ್ತದೆ. ಇದು ನಿಜಕ್ಕೂ ಪ್ರಯಾಣಕ್ಕೆ ಯೋಗ್ಯವಾದ ರೈಲಲ್ಲ..
ಬದಲಿಗೆ ಗುಜರಿಯಿಂದ ತಂದ ರೈಲು ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಇನ್ನು ವಿಡಿಯೋದಲ್ಲಿ ತಮ್ಮ ಅನುಭವ ಹಂಚಿಕೊಂಡ ಯೋಧರು, ತಮಗೆ ಒದಗಿಸಲಾದ ರೈಲು ತುಂಬಾ ಭಯಾನಕ ಸ್ಥಿತಿಯಲ್ಲಿತ್ತು, ಅದರಲ್ಲಿ ಜವಾನರು ಪ್ರಯಾಣಿಸಲು ನಿರಾಕರಿಸಿದರು ಎಂದು ಹೇಳುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್, ಎಚ್ಚೆತ್ತ ರೈಲ್ವೇ ಇಲಾಖೆ ಇನ್ನು ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಎಚ್ಚೆತ್ತುಕೊಂಡ ಭಾರತೀಯ ರೈಲ್ವೇ ಇಲಾಖೆ ಕ್ರಮ ಕೈಗೊಂಡಿದೆ.
ಬಿಎಸ್ಎಫ್ ಈ ವಿಷಯವನ್ನು ಭಾರತೀಯ ರೈಲ್ವೆಯೊಂದಿಗೆ ಚರ್ಚೆ ಮಾಡಿದ್ದು, ಬಳಿಕ ಇಲಾಖೆ ಉತ್ತಮ ಸ್ಥಿತಿಯಲ್ಲಿರುವ ಬದಲಿ ರೈಲನ್ನು ಕಳುಹಿಸಿದೆ ಎನ್ನಲಾಗಿದೆ.
ರೈಲ್ವೆ ಅಧಿಕಾರಿಗಳೊಂದಿಗೆ ಕಳವಳ ವ್ಯಕ್ತಪಡಿಸಲಾಗಿದ್ದರೂ, ಸೈನಿಕರು ಯಾವುದೇ ಗದ್ದಲ ಅಥವಾ ಅವ್ಯವಸ್ಥೆ ಸೃಷ್ಟಿಸಿಲ್ಲ ಎಂದು ಬಿಎಸ್ಎಫ್ ನಂತರ ಸ್ಪಷ್ಟಪಡಿಸಿದೆ. ಅಧಿಕೃತ ಸಂವಹನದ ಮೂಲಕ ಸಮಸ್ಯೆಯನ್ನು ನಿಭಾಯಿಸಲಾಯಿತು, ಇದು ತ್ವರಿತ ಪರಿಹಾರಕ್ಕೆ ಕಾರಣವಾಯಿತು ಎನ್ನಲಾಗಿದೆ.
ರೈಲ್ವೇ ಇಲಾಖೆ ಸ್ಪಷ್ಟನೆ ಇನ್ನು ಈ ವಿಚಾರವಾಗಿ ಈಶಾನ್ಯ ಗಡಿನಾಡು ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ ಕೆ ಶರ್ಮಾ ಪ್ರತಿಕ್ರಿಯಿಸಿದ್ದು, ಕೆಲವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಸಿಬ್ಬಂದಿ ತಪ್ಪಾಗಿ ಈ ನಿರ್ವಹಣಾ ಬೋಗಿಗಳನ್ನು ಹತ್ತಿದರು, ಇದು ಗೊಂದಲಕ್ಕೆ ಕಾರಣವಾಯಿತು ಮತ್ತು ತಪ್ಪು ತಿಳುವಳಿಕೆಗೆ ಕಾರಣವಾಯಿತು.
ದೋಷವನ್ನು ಗುರುತಿಸಿದ ನಂತರ, ಅಗರ್ತಲಾದಲ್ಲಿ ಎರಡು ಬೋಗಿಗಳನ್ನು ರೈಲಿನಿಂದ ತೆಗೆದುಹಾಕಲಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ. ಅಂತೆಯೇ ಸಿಎಪಿಎಫ್ ಸಿಬ್ಬಂದಿ ಎತ್ತಿರುವ ಎಲ್ಲಾ ಕಳವಳಗಳನ್ನು ಪರಿಹರಿಸಲಾಗಿದೆ
ರೈಲು ಉದ್ದೇಶಿತ ಗಮ್ಯಸ್ಥಾನಕ್ಕೆ ತನ್ನ ಪ್ರಯಾಣವನ್ನು ಪುನರಾರಂಭಿಸಿದೆ ಎಂದು ಅವರು ಹೇಳಿದರು. ಅಂದಹಾಗೆ ಬಿಗಿ ಭದ್ರತೆಯಲ್ಲಿ ಈ ತಿಂಗಳ ಕೊನೆಯಲ್ಲಿ ಅಮರನಾಥ ಯಾತ್ರೆ ಪ್ರಾರಂಭವಾಗಲಿದೆ